ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ರಾಜ್ಯದ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದು ನಿನ್ನೆ ಫಲಿತಾಂಶ ಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಗೆದ್ದಿವೆ. ಜೆಡಿಎಸ್ 2 ಹಾಗೂ ಪಕ್ಷೇತರರು 1 ಸ್ಥಾನ ಗೆದ್ದುಕೊಂಡಿದ್ದಾರೆ. ಹೀಗೆ ಗೆದ್ದ ಎಲ್ಲ ಅಭ್ಯರ್ಥಿಗಳು ಹಾಗೂ ಸೋತವರ ಹಿನ್ನೆಲೆ ನೋಡಿದರೆ ಎಲ್ಲರೂ ರಾಜಕೀಯ, ಆರ್ಥಿಕ, ಜಾತಿ ಪ್ರಾಬಲ್ಯ ಉಳ್ಳವರಾಗಿದ್ದಾರೆ. ಇದರ ಜೊತೆಗೆ ವಿಧಾನಸಭೆ ಸದಸ್ಯರ ಕುಟುಂಬಸ್ಥರು.
ವಿಧಾನ ಪರಿಷತ್ ಅನ್ನೋ ಚಿಂತಕರ ಛಾವಡಿ ಎನ್ನುತ್ತಿದ್ದರು. ರಾಜಕೀಯವಾಗಿ ಅವಕಾಶ ವಂಚಿತರಾದ ಸಮುದಾಯ ಹಾಗೂ ಇತರೆ ಕ್ಷೇತ್ರಗಳಲ್ಲಿರುವವರನ್ನು ಆಯ್ಕೆ ಮಾಡಿ ಕಳಿಸುವ ವೇದಿಕೆಯಾಗಿತ್ತು. ಆದರೆ, ಇಂದು ಸಂಪೂರ್ಣವಾಗಿ ಜಾತಿ ಹಾಗೂ ರಾಜಕೀಯ ಕುಟುಂಬದ ಸ್ವತ್ತಾಗಿದೆ. ಒಂದೇ ಕುಟುಂಬದ ಮನೆಯ ಮುಂದೆ ನಾಲ್ಕು ಐದು ಸರ್ಕಾರಿ ವಾಹನಗಳು ನಿಂತುಕೊಳ್ಳುವ ಮಟ್ಟಕ್ಕೆ ಬಂದು ಬಿಟ್ಟಿದೆ. ಹೀಗಾಗಿ ರಾಜಕೀಯ ಹಿನ್ನೆಲೆ, ಜಾತಿ, ಹಣಬಲ ಇಲ್ಲದವರು ವಿಧಾನಸೌಧದ ಮೆಟ್ಟಿಲು ಹತ್ತುವುದು ಕನಸಿನ ಮಾತಾಗಿದೆ.
ತಳಸಮುದಾಯಗಳನ್ನು, ಹಿಂದುಳಿದವರನ್ನು, ಮುಖ್ಯವಾಹಿನಿಯಿಂದ ದೂರ ಇರುವವರನ್ನು ಇನ್ನಷ್ಟು ಮೂಲೆಗುಂಪು ಮಾಡುವ ಯತ್ನ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದೆ ಅನ್ನೋದಕ್ಕೆ ರಾಜ್ಯದ ಇತ್ತೀಚಿನ ಚುನಾವಣೆಗಳು ಸಾಕ್ಷಿಯಾಗಿವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಪ್ಪ-ಮಗ, ಅಣ್ಣ-ತಮ್ಮ, ಅಕ್ಕ-ತಮ್ಮ ಹೀಗೆ ಒಂದೇ ಕುಟುಂಬದ ಸದಸ್ಯರು ಇರುವುದಾದರೆ ಯಾವ ಪುರುಷಾರ್ಥಕ್ಕೆ ವಿಧಾನ ಪರಿಷತ್ ಬೇಕು? ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ ಸೇರಿ ಬೇರೆ ಯಾವ ರಾಜ್ಯಗಳಲ್ಲೂ ವಿಧಾನ ಪರಿಷತ್ ಇಲ್ಲ. ಪರಿಷತ್ ಉದ್ದೇಶವನ್ನೇ ಬುಡಮೇಲು ಮಾಡುತ್ತಿರುವಾಗ ಇದನ್ನು ತೆಗೆದು ಹಾಕುವುದೇ ಒಳ್ಳೆಯದು ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಜನರು ಸಹ ಚಿಂತನೆ ಮಾಡಬೇಕಿದೆ.