ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸರ್ವಾಂಗೀಣ ಸಂರಕ್ಷಣಾ ಟ್ರಸ್ಟ್ ಪದಾಧಿಕಾರಿಗಳು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಇಡೀ ದೇಶ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫ್ ರೆನ್ಸ್ ನಡೆಸಲಾಗಿದೆ. ಈ ವೇಳೆ ವಿವಿಯಲ್ಲಿ ನಡೆದ ಕೆಲ ಪ್ರಾಧ್ಯಾಪಕರ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ರಾಜ್ಯಪಾಲರು ಮತ್ತು ರಾಷ್ಟಪತಿಗಳಿಗೆ ಆಗ್ರಹಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಟ್ರಸ್ಟ್, ಕವಿವಿಯ ಕೆಲವೊಂದಿಷ್ಟು ಪ್ರಾಧ್ಯಾಪಕರು ಪದೇ ಪದೇ ಯುಜಿಸಿ ನಿಯಮಾವಳಿಗಳನ್ನ ಉಲ್ಲಂಘಿಸುತ್ತಿರುವುದು ಸಾಮಾನ್ಯ ಎಂಬಂತೆ ನಡೆಯುತ್ತಿದೆ. ಕೆಲವರು ಎಸ್.ಆರ್. ಬುಕ್ಕಿನಲ್ಲಿ ತಪ್ಪು ಮಾಹಿತಿ ನೀಡಿರುವುದು. ಪದೋನ್ನತಿಗಾಗಿ ಸುಳ್ಳು ದಾಖಲೆ ಮತ್ತು ಮಾಹಿತಿ ನೀಡಿರುವುದು. ತಿಂಗಳು ಗಟ್ಟಲೆ ಯಾವುದೇ ಪಾಠ ಮಾಡದೇ ವೇತನ ಪಡೆಯುತ್ತಿರುವ ಕೆಲ ಪ್ರಾಧ್ಯಾಪಕರು ಇದ್ದಾರೆ. ಅನೇಕರಿಗೆ ಸರ್ಕಾರದ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆಯಿಂದ ಆಕ್ಷೇಪಣೆ ಬಂದಿರುವ ಬಗ್ಗೆ ಟ್ರಸ್ಟ್ ಗೆ ದೂರುಗಳು ಸಹ ಬಂದಿವೆ.
ಕೆಲವು ಪ್ರಾಧ್ಯಾಪಕರು ತಮ್ಮದೇ ಅಂದಾ ದರ್ಬಾರ್ ನಡೆಸುತ್ತಿದ್ದು, ವಿವಿಯ ಕುಲಪತಿ ಮತ್ತು ಕುಲಸಚಿವರನ್ನು ವಿನಾಃ ಕಾರಣ ಬೆದರಿಸುವ ತಂತ್ರವನ್ನು ಮಾಡುತ್ತಿರುವುದು ಖಂಡನೀಯ. ದೇಶದ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ನೀಡುವ ವಿವಿಗಳ ಪಾತ್ರವು ಪ್ರಮುಖವಾಗಿದೆ. ಆದರೆ ಕೆಲವು ಪಟ್ಟಬದ್ಧ ಹಿತಾಶಕ್ತಿಯ ಪ್ರಾಧ್ಯಾಪಕರುಗಳಿಂದ ಇಡೀ ವಿವಿಯ ಘನತೆ ಹಾಳಾಗುವಂತಾಗಿದೆ. ಸದಾ ಒಂದಿಲ್ಲೊಂದು ಹಗರಣ ಮತ್ತು ಅವ್ಯಹಾರದ ಮೂಲಕ ಸುದ್ದಿಯಾಗುತ್ತಿರುವ ಕವಿವಿಯ ಘನತೆಯನ್ನು ಉಳಿಸುವ ಪ್ರಯತ್ನಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮುಂದಾಗಬೇಕಿದೆ ಅನ್ನೋ ಮಾತುಗಳು ಈ ವೇಳೆ ಕೇಳಿ ಬಂದಿದೆ.
ಲಾಕ್ ಡೌನ್ ತೆರವುಗೊಂಡ ನಂತರ ವಿವಿಯ ಕುಲಪತಿ ಮತ್ತು ಕುಸಚಿವರ ಜತೆ ಸಭೆ ನಡೆಸಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮತ್ತೊಮ್ಮೆ ಒತ್ತಾಯಿಸಲಾಗುವುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಮತ್ತು ಕಾರ್ಯದರ್ಶಿ ನಾಗರಾಜ ಗುರಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.