ವಿಜಯಪುರ: ಕೆಲವರು ಮನಸ್ಸು ಎಷ್ಟೊಂದು ವಿಕೃತಗೊಂಡಿರುತ್ತವೆ ಅನ್ನೋದಕ್ಕೆ ಇದೊಂದು ಉದಾಹರಣೆ. ಕೆಬಿಜೆಎನ್ಎಲ್ ಬಳೂತಿ ಜಾಕ್ ವೆಲ್ ನ್ನ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದರ ಪರಿಣಾಮ ಕಾಲುವೆ ನೀರು ಜಮೀನುಗಳಿಗೆ ನುಗ್ಗಿವೆ.
ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ರಮೇಶ ಮಮದಾಪೂರ ಎಂಬುವರಿಗೆ ಸೇರಿದ 22 ಎಕರೆ ಜಮೀನು ಜಲಾವೃತವಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು, ಶೇಂಗಾ, ಮೆಕ್ಕೆಜೋಳ ಸಂಪೂರ್ಣ ಹಾನಿಯಾಗಿದೆ.
ಇನ್ನು ಜಮೀನಿಗೆ ಹರಿದ ನೀರಿನಿಂದ ಎರಡು ಬಾವಿಗಳು ಭರ್ತಿಯಾಗಿ, ಮೂರು ಪಂಪ್ ಸೇಟ್ ಹಾನಿಯಾಗಿವೆ. ಒಂದೆಡೆ ಕರೋನಾ ಮತ್ತೊಂದೆಡೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ರೈತ ಕಂಗಾಲಾಗಿದ್ದಾನೆ. ಇದ್ರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕೃತ್ಯವೆಸಗಿದವರನ್ನ ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬೇಕಿದೆ.