ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹೊಸಪೇಟೆಯಲ್ಲಿ ಭಾನುವಾರ ಸಂಜೆ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರದ 2ನೇ ಸಾಂಗ್ ರಿಲೀಸ್ ಮಾಡಲಾಗಿದೆ. ಈ ವೇಳೆ ದರ್ಶನ್ ಅವರ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ. ಇದನ್ನು ಇಡೀ ಚಿತ್ರರಂಗ ಖಂಡಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮಾತನಾಡಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇದು ಯಾರೆ ಮಾಡಿದರೂ ತಪ್ಪೆ. ನಾವೆಲ್ಲ ಒಂದೇ. ನಾವು ಕಲಾವಿದರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು ಅಂತಾ ಅಪ್ಪಾಜಿ ಯಾವಾಗಲೋ ಹೇಳಿದ್ದಾರೆ. ನಾವೆಲ್ಲ ಒಂದೆ. ಒಬ್ಬರಿಗೆ ಅವಮಾನ ಆದರೆ ಎಲ್ಲರಿಗೂ ಆದಂತೆ. ದಯವಿಟ್ಟು ಯಾರು ಈ ರೀತಿ ಮಾಡಕ್ಕೆ ಪ್ರಯತ್ನ ಮಾಡಬೇಡಿ. ನಾವೆಲ್ಲ ಒಂದೆ ಎಂದು ಶಿವಣ್ಣ ಹೇಳಿದ್ದಾರೆ.
ಹೊಸಪೇಟೆ ಜನತೆ ಬಗ್ಗೆ ದಿವಂಗತ ಡಾ.ಪುನೀತ್ ರಾಜಕುಮಾರ್ ಸಾಕಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅಭಿಮಾನಿಗಳು ಸಹ ಅಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಕ್ರಾಂತಿ 2ನೇ ಸಾಂಗ್ ಅಪ್ಪು ನೆಚ್ಚಿನ ಊರಿನಲ್ಲಿ ಎಂದು ದರ್ಶನ್ ಹೇಳಿದ್ದರು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಪ್ಪು ಅವರಿಗೆ ಜೈಕಾರ ಹಾಕಲಾಯಿತು. ಅವರ ಬ್ಯಾನರ್ ರಾರಾಜಿಸಿದ್ದವು. ಈ ಘಟನೆ ಅವರ ಅಭಿಮಾನಿಗಳತ್ತ ಬೊಟ್ಟು ಮಾಡುತ್ತಿದ್ದು, ಶಿವಣ್ಣನವರ ಈ ಮಾತು ಎಲ್ಲ ವಿವಾದಕ್ಕೆ ತೆರೆ ಎಳೆಯಬಹುದು.