ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರು ಇಂದು ಬೆಳಗ್ಗೆ 11.30ಕ್ಕೆ ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಕೃಷ್ಣರಾಜ ಸಾಗರ ತುಂಬಿ ಕೆಲ ದಿನಗಳು ಕಳೆದ್ರೂ ಬದಲಾದ ಪರಿಸ್ಥಿತಿ, ರಾಜಕೀಯ ಮೇಲಾಟಗಳಿಂದ ಬಾಗಿನ ಅರ್ಪಿಸಲು ಆಗಿರ್ಲಿಲ್ಲ. ಇಂದು ಅದಕ್ಕೆ ಮುಹೂರ್ತ ಕೂಡಿ ಬಂದಿದೆ. ಈ ವೇಳೆ ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳ ಜೆಡಿಎಸ್ ಶಾಸಕರಿಗೆ ಆಹ್ವಾನ ನೀಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷ ಸಿಎಂ ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಇದು ಗುಂಡೂರಾವ ಅವರು ಸಿಎಂ ಆಗಿದ್ದ ಟೈಂನಲ್ಲಿ ಮೊದಲ ಬಾರಿಗೆ ಕೃಷ್ಣರಾಜ ಸಾಗರ ತುಂಬಿದ್ದಕ್ಕಾಗಿ ಕಾವೇರಿಗೆ ಬಾಗಿನ ಅರ್ಪಿಸಿದ್ರು. ಅಲ್ಲಿಂದ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ.
ಕೃಷ್ಣೆಗೆ ಬಾಗಿನ ಯಾವಾಗ?
ಇನ್ನು ಉತ್ತರ ಕರ್ನಾಟಕದ ಜೀವನದಿ ಎಂದು ಕರೆಸಿಕೊಳ್ಳುವ ಕೃಷ್ಣೆಗೆ ಸಿಎಂ ಅವರು ಬಾಗಿನ ಅರ್ಪಿಸುವುದು ಯಾವಾಗ ಎಂದು ಈ ಭಾಗದ ಜನ ಕೇಳ್ತಿದ್ದಾರೆ. ಈ ಹಿಂದಿನ ಮೈತ್ರಿ ಸರ್ಕಾರದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಲು ಬರುವ ಟೈಂನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಕೊನೆಗಳಿಗೆಯಲ್ಲಿ ರದ್ದಾಯ್ತು. ಇದಕ್ಕಾಗಿ ಖರ್ಚು ಮಾಡಿದ ಹಣವೂ ವ್ಯರ್ಥವಾಯ್ತು.
ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ತುಂಬಿದೆ. ಇಷ್ಟು ದಿನಗಳ ಕಾಲ ಸಂಭವಿಸಿದ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಮರಳಿ ಬದುಕು ಕಟ್ಟಿಕೊಳ್ಳಲು ಪರದಾಡ್ತಿದ್ದಾರೆ. ಈ ಟೈಂನಲ್ಲಿ ಕೃಷ್ಣೆ ಮತ್ತೆ ಮುನಿಸಿಕೊಳ್ಳದಂತೆ ಬಾಗಿನ ಅರ್ಪಿಸುವುದು ಯಾವಾಗ ಎಂದು ಈ ಭಾಗದ ಜನರು ಸಿಎಂ ಅವರನ್ನ ಪ್ರಶ್ನೆ ಮಾಡ್ತಿದ್ದಾರೆ.