ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ 45ಕ್ಕೂ ಹೆಚ್ಚು ದಿನಗಳಿಂದ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದೊಂದಿಗೆ 8 ಬಾರಿ ನಡೆದ ಮಾತುಕತೆ ಸಹ ವಿಫಲವಾಗಿವೆ. ಇದೀಗ ಸುಪ್ರೀಂ ಎಂಟ್ರಿ ಕೊಟ್ಟು, ಕಾಯ್ದೆ ಜಾರಿಗೆ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎಸ್.ಎ ಬೋಪಣ್ಣ, ವಿ ರಾಮ ಸುಬ್ರಮಣಿಯಣ್ ಅವರಿದ್ದ ವಿಭಾಗೀಯ ಪೀಠ, ರೈತರ ಪ್ರತಿಭಟನೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಕೃಷಿ ಕಾನೂನುಗಳಿಗೆ ತಡೆ ನೀಡಿದೆ. ಅಲ್ದೇ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದು ನೇಮಿಸಿದೆ.
ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಧಾನಿಗೆ ಹೇಳುವ ಅಧಿಕಾರ ನಮಗಿಲ್ಲ. ಅಲ್ದೇ, ಕಾಯ್ದೆಗೆ ತಡೆ ನೀಡುವುದ್ರಿಂದಲೂ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಉನ್ನತ ಮಟ್ಟದ ಸಮಿತಿಯೊಂದು ರಚನೆ ಮಾಡುತ್ತೇವೆ. ಆ ಸಮಿತಿ ಸಮಗ್ರ ವರದಿ ನೀಡಲಿ. ಪ್ರತಿಭಟನೆಯಲ್ಲಿ ಭಾಗವಹಿಸಿರುವ 400 ಸಂಘಟನೆಗಳನ್ನ ಸಂಪರ್ಕಿಸಿ ಅಭಿಪ್ರಾಯ ಕೇಳಿ ವರದಿ ನೀಡಲಿ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬ್ಡೆ ಹೇಳಿದ್ರು. ಇನ್ನು ಮುಂದಿನ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ.