ವಿಜಯಪುರ: ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಸೇವೆ ಶುರುವಾಗಿದೆ. ಹೀಗಾಗಿ ಕಳೆದ 2 ತಿಂಗಳಿನಿಂದ ತಮ್ಮೂರಿಗೆ ಹೋಗಲು ಆಗದೇ ಲಾಕ್ ಆದವರು ಊರಿಗೆ ಹೊರಟಿದ್ದಾರೆ. ಆದ್ರೆ, ವಿಜಯಪುರದಲ್ಲಿ ಆ ಜೋಶ್ ಕಂಡು ಬರ್ತಿಲ್ಲ. ಬಸ್ ನಿಲ್ದಾಣಗಳತ್ತ ಪ್ರಯಾಣಿಕರು ಬರುವು ಸಂಖ್ಯೆ ಕಡಿಮೆಯಿದೆ.
ವಿಜಯಪುರದಿಂದ ವಿವಿಧ ಜಿಲ್ಲೆಗೆ 8 ಬಸ್ ಡಿಪೋಗಳ ಮೂಲಕ 250 ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೇ, ವಿಜಯಪುರ ತಾಲೂಕುಗಳು, ಹೋಬಳಿಗಳು ಪ್ರಮುಖ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭವಾದ್ರೂ ಈವರೆಗೆ ಸುಮಾರು 80ಕ್ಕೂ ಹೆಚ್ಚು ಬಸ್ ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬಂದಿಲ್ಲ. ಈ ಮೂಲಕ ವಿಜಯಪುರ ಎನ್ ಇಕೆಆರ್ ಟಿಸಿಗೆ ಪ್ರಯಾಣಕರ ಬರದ ಸಮಸ್ಯೆ ಎದುರಾಗಿದೆ.
ಜಿಲ್ಲೆಯ ಜನರಲ್ಲಿ ಕರೋನಾ ಭಯ ಜೋರಾಗಿದೆ. ಬಸ್ ಸಂಚಾರ ಕಲಬರಗಿಗೂ ನಡೆಸುತ್ತಿವೆ. ಈ ಜಿಲ್ಲೆಯಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿದ್ದಾರೆ. ಹೀಗಾಗಿ ಪ್ರಯಾಣ ಮಾಡಲು ಹಿಂದೇಟು ಹಾಕ್ತಿದ್ದು, ಒಂದು ಬಸ್ಸಿನಲ್ಲಿ 30ಜನಕ್ಕೆ ಮಿತಿ ಇದ್ರೂ 8 ರಿಂದ 10 ಜನ ಪ್ರಯಾಣಿಕರು ಬಂದ್ರೆ ದೊಡ್ಡದು ಅನ್ನುವಂತಾಗಿದೆ.
ಬಸ್ ಪ್ರಯಾಣ ಮಾಡುವಾಗ ಹೆಸರು, ವಯಸ್ಸು, ಮೊಬೈಲ್ ನಂಬರ್ ನ್ನ ಕಂಡೆಕ್ಟರ್ ಬಳಿ ನೀಡಬೇಕು. ಇದು ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕು ಕಾಣಿಸಿಕೊಂಡ್ರೆ ಪ್ರಯಾಣದ ಹಿನ್ನೆಲೆಯನ್ನ ತ್ವರಿತವಾಗಿ ಪಡೆಯಬಹುದಾಗಿದೆ. ಇನ್ನು 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರನ್ನ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.