ಮಂಡ್ಯ: ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹೊಸಹೊಳಲು ಗ್ರಾಮದ ಹೊರವಲಯದಲ್ಲಿರುವ ಇಟ್ಟಿಗೆ ಗೂಡು ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಇದ್ರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಹೊಸಹೊಳಲು ಗ್ರಾಮದ ಯುವಕ ಕೃಷ್ಣ ಸಾಲ ಸೋಲ ಮಾಡಿ ಸ್ಥಾಪಿಸಿದ್ದ ಇಟ್ಟಿಗೆ ಫ್ಯಾಕ್ಟರಿಯ ಮೇಲ್ಛಾವಣಿಯು ಕುಸಿದು ಬಿದ್ದಿದೆ. ಸುಡಲು ಸಿದ್ಧಪಡಿಸಿದ್ದ ಸಾವಿರಾರು ಇಟ್ಟಿಗೆಗಳು ನಾಶವಾಗಿವೆ. ಮಳೆ ನೀರಿಗೆ ಇಟ್ಟಿಗೆ ಕರಗಿಹೋಗಿವೆ. ಫ್ಯಾಕ್ಟರಿಯ ಮೇಲ್ಛಾವಣಿಯ ಶೀಟುಗಳು ಭಾರೀ ಬಿರುಗಾಳಿ ಮಳೆಗೆ ಹಾರಿಹೋಗಿವೆ.
ಸಾಲ ಮಾಡಿ ಬದುಕು ಕಟ್ಟಿಕೊಳ್ಳಲು ಶುರು ಮಾಡಿದ ಇಟ್ಟಿಗೆ ಫ್ಯಾಕ್ಟರಿ ಕಣ್ಮುಂದೆಯೇ ನಾಶವಾಗಿದ್ದು, ಸಂಕಷ್ಟದಲ್ಲಿರುವ ಕೃಷ್ಣ ಅವರು, ಸರ್ಕಾರ ತಮ್ಮ ಸಹಾಯಕ್ಕೆ ಬರಬೇಕು. ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡರು ಸಹಾಯ ಹಸ್ತವನ್ನ ಚಾಚಬೇಕು ಎಂದು ಮನವಿ ಮಾಡಿದ್ದಾರೆ.