ಪ್ರಜಾಸ್ತ್ರ ಸುದ್ದಿ
ಮಂಡ್ಯ: ರಾಷ್ಟ್ರಧ್ವಜ ಹಾಗೂ ಕನ್ನಡದ ಬಾವುಟ ಹಾರಿಸುವುದಾಗಿ ಅನುಮತಿ ಪಡೆದು ಹನುಮಾನ ಧ್ವಜ ಹಾರಿಸಿರುವ ಪ್ರಕರಣ ರಾಜಕೀಯ, ಧಾರ್ಮಿಕ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿದೆ. ಬಿಜೆಪಿ-ಜೆಡಿಎಸ್ ಜೊತೆಯಾಗಿ ಪ್ರತಿಭಟನೆ ನಡೆಸಿವೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರಿಗೆ ನನ್ನ ಮೇಲೆ ಹೇಳಲು ಏನೂ ಇಲ್ಲ. ಹೀಗಾಗಿ ನನ್ನನ್ನು ಹಿಂದೂ ವಿರೋಧಿ ಎಂದು ಹೇಳುತ್ತಾರೆ. ರಾಷ್ಟ್ರಧ್ವಜ, ಕನ್ನಡ ಬಾವುಟ ಹಾರಿಸೋದಾಗಿ ಅನುಮತಿ ಪಡೆದುಕೊಂಡಿದ್ದರು. ಯಾವುದಕ್ಕೆ ಅನುಮತಿ ಪಡೆದಿದ್ದಾರೋ ಆ ಬಾವುಟ ಹಾರಿಸಬೇಕು ಅಲ್ಲವೇ? ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಪ್ರಚೋದನೆ ನಡೆಯುತ್ತದೆ ಎಂದು ವಾಗ್ದಾಳಿ ನಡಸಿದರು.
ಜಾತ್ಯಾತೀತ ಅಂದರೆ ಸಹಬಾಳ್ವೆ, ಸಹಿಷ್ಣುತೆ. ನಾನು ಸಹ ಹಿಂದೂ. ಆದರೆ ನಾನು ಎಲ್ಲ ಜಾತಿಯ ಜನರನ್ನು ಪ್ರೀತಿಸುತ್ತೇನೆ ಎನ್ನುವ ಮೂಲಕ ಬಿಜೆಪಿಯ ಹಿಂದೂ ವಿರೋಧಿ ಹೇಳಿಕೆಗೆ ತಿರುಗೇಟು ನೀಡಿದರು.