ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಉತ್ತರ ಭಾರತ ಭಾಗದಲ್ಲಿ ಇದೀಗ ರಕ್ಕಸ ಮಿಡತೆ ಹಾವಳಿ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅಲ್ದೇ, ಕರ್ನಾಟಕಕ್ಕೂ ಕಾಲಿಟ್ಟಿದ್ದು ಕೋಲಾರ ಸೇರಿದಂತೆ ಇತರೆ ಕಡೆ ಮಿಡತೆ ಕಾಟ ಶುರುವಾಗಿದೆ. ಕರೋನಾ ಕಂಟ್ರೋಲ್ ಮಾಡುವುದು ಕಷ್ಟವಾಗಿರುವ ಹೊತ್ತಿನಲ್ಲಿ ಮಿಡತೆ ಹಾವಳಿ ರೈತರ ನಿದ್ದೆಗೆಡಿಸಿದೆ.
ಕಲಬುರಗಿ, ಬೀದರ, ಬಳ್ಳಾರಿ, ರಾಯಚೂರು ಭಾಗದ ಜನರಲ್ಲಿ ಸಹ ಆತಂಕ ಮೂಡಿದೆ. ಕೃಷಿ ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಈ ಭಾಗಕ್ಕೆ ಮಿಡತೆ ಹಾವಳಿ ಕಾಣಿಸುವುದಿಲ್ಲವೆಂದು ಹೇಳಲಾಗಿದೆ. ಆದ್ರೆ, ಈ ಭಾಗದ ಜನರು 2016ರಲ್ಲೇ ಹಸಿರು ಮಿಡತೆ ಹಾವಳಿ ಅನುಭವಿಸಿದ್ದಾರೆ ಎಂದು ಸ್ಥಳೀಯರು ಹೇಳ್ತಿದ್ದಾರೆ. ಹಸಿರು ಮಿಡತೆಯಿಂದ ಬೆಳೆದ ಬೆಳೆಗಳೆಲ್ಲ ನಾಶವಾದ್ವು. ಬಡ ರೈತರು ಕಣ್ಣೀರಿನಲ್ಲಿ ಕೈತೊಳೆದ್ರು. ಅಂದು ಸರ್ಕಾರ ಹೆಚ್ಚಿನ ಗಮನ ಹರಿಸಲಿಲ್ಲ. ಮಾಧ್ಯಮಗಳಲ್ಲಿಯೂ ನಿರ್ಲಕ್ಷಿಸಲಾಯ್ತು ಎಂದು ಆಕ್ರೋಶ ಹೊರ ಹಾಕ್ತಿದ್ದಾರೆ.
ಉತ್ತರ ಭಾರತದಲ್ಲಿ ಮಿಡತೆ ಹಾವಳಿ ಶುರುವಾದ ತಕ್ಷಣ ಭರ್ಜರಿ ಚರ್ಚೆಯಾಗ್ತಿದೆ. ಈ ಬಗ್ಗೆ ಎಲ್ಲರೂ ಮಾತ್ನಾಡ್ತಿದ್ದಾರೆ. ದಕ್ಷಿಣ ಭಾರತ ಭಾಗದಲ್ಲಿ ಕಾಣಿಸಿಕೊಂಡಿದ್ರೂ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗ್ಲಿಲ್ಲ. ಅದರ ಫಲವೇ ಇದೀಗ ಅನುಭವಸುವಂತಾಗಿದೆ. ಇದರ ಜೊತೆಗೆ ಕೃಷಿ ತಜ್ಞರ ಪ್ರಕಾರ 1962ರಲ್ಲೇ ಕರ್ನಾಟಕದಲ್ಲಿ ಮಿಡತೆ ಹಾವಳಿ ಶುರುವಾಗಿತ್ತು ಎನ್ನಲಾಗ್ತಿದೆ. ಆದ್ರೆ, ಇದಕ್ಕೆ ದೃಢವಾದ ಸಾಕ್ಷಾಧಾರಗಳು ಇಲ್ಲ.
ಗಾಳಿ ಬೀಸುವ ದಿಕ್ಕಿನ ಕಡೆ ಮಿಡತೆ ವಲಸೆ ಶುರುವಾಗುತ್ತೆ. ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಬೇವು ಆಧಾರಿತ ಕೀಟನಾಶಕ, ಮಾಲಾಥಿಯನ್ ಕೀಟನಾಶಕ, ಮೆಟಾರ್ಜಿಜಿಯಂ ಅನಿಸೊಪ್ಲಿಯಾದಂತ ಕೀಟನಾಶಕ ಬಳಕೆ ಮಾಡುವುದ್ರಿಂದ ನಿಯಂತ್ರಣ ಮಾಡಬಹುದು. ಅಲ್ದೇ, ಮಿಡತೆ ತಿನ್ನುವ ಹಕ್ಕಿಗಳು ಹಾಗೂ ಕೋಳಿಗಳಿಂದ ನಿಯಂತ್ರಣಕ್ಕೆ ಬರುತ್ತೆ ಎಂದು ತಜ್ಞರು ತಿಳಿಸಿದ್ದಾರೆ.