ಪ್ರಜಾಸ್ತ್ರ ಸುದ್ದಿ
ಹಾವೇರಿ: ಶಾಸಕ ಉಮೇಶ ಕತ್ತಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರು ಸಭೆ ನಡೆಸಿದ್ದಾರೆ ಅನ್ನೋ ವಿಚಾರಕ್ಕೆ, ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಶಾಸಕರು ಮಾರಾಟಕ್ಕೆ ಇಲ್ಲ. ನಮ್ಮಲ್ಲಿ ನಿಷ್ಠೆಯನ್ನ ಹೊಂದಿರುವ ಶಾಸಕರಿದ್ದಾರೆ. ಈ ರೀತಿಯಾಗುವುದು ಬೇರೆ ಪಕ್ಷದಲ್ಲಿ. ನಮ್ಮಲ್ಲಿ ಅಲ್ಲ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅತೃಪ್ತ ಶಾಸಕರನ್ನ ಸೆಳೆಯುವ ಸಾಧ್ಯತೆಯಿದೆ ಅನ್ನೋ ಮಾತಿಗೆ ಉಪಮುಖ್ಯಮಂತ್ರಿ ಸವದಿ ಈ ರೀತಿ ಉತ್ತರಿಸಿದ್ದಾರೆ. ಆದ್ರೆ, ಡಿಸಿಎಂ ಅವರ ತಮ್ಮ ಪಕ್ಷದ ಶಾಸಕರನ್ನ ಹೊಗಳಿದ್ದಾರೋ ಅಥವ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಿಜೆಪಿ ಸೇರಿ ಶಾಸಕರು, ಸಚಿವರಾದವರಿಗೆ ಪರೋಕ್ಷವಾಗಿ ತೀವಿದಿದ್ದಾರೋ ಅನ್ನೋ ಪ್ರಶ್ನೆ ಮೂಡಿದೆ. ಮೊದಲಿನಿಂದಲೂ ವಲಸೆ ಬಂದ ಶಾಸಕರು ಹಾಗೂ ಬಿಜೆಪಿಯ ಕೆಲ ಮೂಲ ಶಾಸಕರ ನಡುವೆ ತೆರೆಮರೆಯ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಮೈತ್ರಿ ಸರ್ಕಾರ ಕೆಡವಿ ಬಿಜೆಪಿಗೆ ಸಾಥ್ ನೀಡಿದ ಅಂದಿನ ಕಾಂಗ್ರೆಸ್, ಜೆಡಿಎಸ್ ಶಾಸಕರಂತೆ ಈಗಿನ ಕೆಲ ಬಿಜೆಪಿ ಶಾಸಕರು, ಸಿಎಂ ಬಿ.ಎಸ್ ಯಡಿಯೂರಪ್ಪ ನಾಯಕತ್ವದ ವಿರುದ್ಧ ತೊಡೆ ತಟ್ಟಿ ಸರ್ಕಾರವನ್ನ ಕೆಡವಲು ಸಜ್ಜಾದ್ರಾ ಅನ್ನೋ ಕುತೂಹಲ ಮೂಡಿದೆ. ಇದ್ರಿಂದಾಗಿ ಕರೋನಾ ಕಾಟದ ಹೊತ್ತಿನಲ್ಲಿ ಬಿಜೆಪಿ ಕೆಲ ಶಾಸಕರು ಈ ರೀತಿ ನಡೆದುಕೊಳ್ತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.