ಪ್ರಜಾಸ್ತ್ರ ಸುದ್ದಿ
ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ಸರ್ಕಾರ ದರ ನಿಗಿದಿ ಮಾಡಿದೆ. ಈ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾಕಂದ್ರೆ, ಖಾಸಗಿ ಆಸ್ಪತ್ರೆ ಅಂದ್ರೆ, ಹಣ ಸೂಲಿಗೆ ಮಾಡೋರು ಅನ್ನೋ ಹಣೆ ಪಟ್ಟೆ ಅಂಟಿದೆ. ಅಷ್ಟೊಂದು ಪ್ರಕರಣಗಳು ನಡೆದಿವೆ. ಇದೀಗ ನಗರದಲ್ಲಿ ಇದೆ ಆಗಿದೆ ನೋಡಿ.
ಜಿಲ್ಲಾಸ್ಪತ್ರೆ ವೆನ್ಲಾಕ್ ನ್ನ ಕೋವಿಡ್ 19 ಸಲುವಾಗಿ ನಿಗಿದಿ ಮಾಡಿದ್ಮೇಲೆ, ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮನೆಗೆ ಹೋದರು. ತೀವ್ರ ಅನಾರೋಗದವರನ್ನ, ಬಡವರನ್ನ, ನಿರ್ಗತಿಕರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ಅಲ್ಲಿ ಹಣ ಇಲ್ಲದೆ ಚಿಕಿತ್ಸೆ ಎಲ್ಲಿಂದ ಹೇಳಿ? ಹೀಗಾಗಿ ಹಲವರು ಲಾಕ್ ಡೌನ್ ಟೈಂನಲ್ಲೇ ಬೀದಿಗೆ ಬಂದರು.
ಈಗ ನಿನ್ನೆ ರಾತ್ರಿ ಕೆಲ ಹಿರಿಯ ನಾಗರಿಕ ರೋಗಿಗಳನ್ನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಿಂದ ಸಿಬ್ಬಂದಿ ವಾಹನದಲ್ಲಿ ಕರೆದುಕೊಂಡು ಬಂದು ಕಂಕನಾಡಿಯ ಮಾರುಕಟ್ಟೆ ಬಳಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ. ಹೃದಯ ಕಾಯಿಲೆ, ಕಾಲು ನೋವು ಸೇರಿದಂತೆ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದ ಬಡವರನ್ನ ರಾತ್ರೋರಾತ್ರಿ ಹೊರ ಹಾಕಲಾಗಿದೆ. ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದು, ಮಾರ್ಕೆಟ್ ಮಂದಿ ಅನ್ನ, ನೀರು ಕೊಟ್ಟಿದ್ದಾರೆ.
ಇದು ಖಾಸಗಿ ಆಸ್ಪತ್ರೆಗಳ ಹಣದಾಹಕ್ಕೆ ಸಾಕ್ಷಿ. ಇಂಥಾ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳು ಚಿಕಿತ್ಸೆಗೆ ಹೋದರೆ, ಜೀವಂತವಾಗಿ ಬರುವುದು ಡೌಟು. ಯಾಕಂದ್ರೆ, ಅದೆಷ್ಟೋ ಬಡವರಿಗೆ ಸರ್ಕಾರ ನಿಗದಿ ಮಾಡಿರುವ ಹಣ ಸಹ ನೀಡಲು ಆಗಲ್ಲ. ಲಾಕ್ ಡೌನ್ ಎಫೆಕ್ಟ್ ನಿಂದ ಇನ್ನು ಹೊರ ಬರಲು ಆಗ್ತಿಲ್ಲ. ಅಂತವರು, ಐಸಿಯು, ಐಸೋಲೇಷನ್ ವಾರ್ಡ್ ಗೆ ಹೋಗಕ್ಕೆ ಆಗುತ್ತಾ? ಜನರಲ್ ವಾರ್ಡ್ ನಲ್ಲಿಯೂ ಚಿಕಿತ್ಸೆ ಸಿಗದೆ ಸಾಯೋದು ಪಕ್ಕಾ. ಹೀಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿರುವುದು ಬಿಟ್ಟು, ಸರ್ಕಾರಿ ಆಸ್ಪತ್ರೆಯಲ್ಲಿಯೇ ಅವರಿಗೆ ಉಚಿತ ಚಿಕಿತ್ಸೆ ನೀಡಬೇಕಿದೆ. ಇಲ್ದೇ ಹೋದ್ರೆ, ರಾಜ್ಯದಲ್ಲಿ ಕರೋನಾ ಹೆಣಗಳ ರಾಶಿ ನೋಡಬೇಕಾಗುತ್ತೆ.