ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ತೆರಿಗೆ ವಂಚನೆ ಮಾಡುವ ಉದ್ಯಮಿಗಳ ಮೇಲೆ ಆಗಾಗ ಲೋಕಾಯುಕ್ತ, ತೆರಿಗೆ ಇಲಾಖೆ, ಸಿಬಿಐ ದಾಳಿಗಳು ನಡೆಯುತ್ತವೆ. ಪ್ರತಿ ದಾಳಿ ವೇಳೆ ಒಬ್ಬೊಬ್ಬ ವ್ಯಕ್ತಿ ಬಳಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗುತ್ತೆ. ಇದಾದ ಬಳಿಕ ಏನಾಗುತ್ತೆ ಅನ್ನೋ ಪ್ರಶ್ನೆಗೆ ಸಾರ್ವಜನಿಕರಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಕಳೆದ ಎರಡು ದಿನಗಳ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತರ ದಾಳಿ ನಡೆದಿದೆ. ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಓರ್ವ ತಹಶೀಲ್ದಾರ್ ಹತ್ತಿರ 500 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗುತ್ತೆ ಅಂದರೆ ಅಧಿಕಾರಿಗಳು ಎಷ್ಟೊಂದು ಭ್ರಷ್ಟರಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇದು.
ಹೀಗೆ ಪ್ರತಿ ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆಯಾಗುತ್ತೆ. ಸಕ್ರಮ ಆಸ್ತಿ ಬಿಟ್ಟು ಅಕ್ರಮ ಆಸ್ತಿ ಏನಾಗುತ್ತೆ? ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಾ? ಇಷ್ಟೊಂದು ಭ್ರಷ್ಟಾಚಾರ ಮಾಡಿದ ಅಧಿಕಾರಿಗೆ ಏನು ಶಿಕ್ಷೆಯಾಗುತ್ತೆ? ಅವರ ಕೆಲಸ ಏನಾದರೂ ಕಳೆದುಕೊಳ್ಳುತ್ತಾರಾ? ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹೀಗಾಗಿ ಲೋಕಾಯುಕ್ತ ದಾಳಿ ಅಂದರೆ ಅಧಿಕಾರಿಗಳಿಗೂ ಭಯವಿಲ್ಲ. ಜನರಿಗೆ ಆಸಕ್ತಿ ಇಲ್ಲ. ದಾಳಿ ನಂತರ ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಭ್ರಷ್ಟರಿಗೆ ಏನು ಶಿಕ್ಷೆಯಾಗಿದೆ, ಅವರ ಅಕ್ರಮ ಆಸ್ತಿ ಏನು ಮಾಡಲಾಗಿದೆ ಎಂದು ತನಿಖೆ ಬಳಿಕ ತಿಳಿಸಬೇಕು. ಇದ್ಯಾವುದೂ ನಡೆಯುತ್ತಿಲ್ಲ. ಇದರಿಂದಾಗಿಯೇ ಭ್ರಷ್ಟಚಾರಕ್ಕೆ ಕಡಿವಾಣ ಬೀಳುತ್ತಿಲ್ಲ ಅಂತಿದ್ದಾರೆ.