ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಗಿರಿಗಳ ನಾಡು ಎಂದೇ ಖ್ಯಾತಿ ಗಳಿಸಿರುವ ಯಾದಗಿರಿ ಜಿಲ್ಲೆಯಲ್ಲಿರುವ ಮೈಲಾಪುರ ಮಲ್ಲಯ್ಯನ ಜಾತ್ರೆ ಮಕರ ಸಂಕ್ರಮಣದಂದು ನಡೆಯುತ್ತೆ. ಕೋವಿಡ್ ಕಾರಣಕ್ಕೆ ಕಳೆದ 2 ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಜಾತ್ರೆ ನಡೆಯುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾನುವಾರ ಅದ್ಧೂರಿ ಜಾತ್ರೆ ನಡೆಯಲಿದೆ.
ಕರ್ನಾಟಕದಲ್ಲಿ ನೆಲೆಸಿರುವ ಮೈಲಾರಲಿಂಗನ ದರ್ಶನಕ್ಕೆ ಆಂಧ್ರ, ತೆಲಂಗಾಣ ಸೇರಿದಂತೆ ನೆರೆಯ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ. ಏಳು ಕೋಟಿ ಏಳು ಕೋಟಿಗೆ ಎಂದು ಜಯಘೋಷ ಕೂಗುವ ಮೂಲಕ ಭಕ್ತರು ಸಂಭ್ರಮಿಸುತ್ತಾರೆ. ಮಲ್ಲಯ್ಯನ ದರ್ಶನಕ್ಕೆ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪಲ್ಲಕ್ಕಿ ಉತ್ಸವದ ವೇಳೆ ಕುರಿಗಳನ್ನು ಹಾರಿಸಲಾಗುತ್ತೆ. ಹೀಗೆ ಮಾಡಿದರೆ ಕುರಿಗಳ ಸಂತಾನ ಹೆಚ್ಚಾಗುತ್ತೆ ಅನ್ನೋ ನಂಬಿಕೆ ಇದೆ.
ಇನ್ನು ಕೆಲ ಸಮುದಾಯದ ಜನರು ಮೈಲಾರನ ಹೆಸರಿನಲ್ಲಿ ಊರ ಹೊರ ಭಾಗದಲ್ಲಿ ಕುರಿ, ಕೋಳಿ ಬಲಿ ಕೊಡುತ್ತಾರೆ. ಪ್ರಾಣಿ ಬಲಿ ಕೊಡುವುದು ನಿಷೇಧವಿದ್ದರೂ ಪೊಲೀಸರ ಕಣ್ತಪ್ಪಿಸಿ ಬಲಿ ಕೊಡುವ ಕೆಲಸ ಸಹ ನಡೆಯುತ್ತೆ. ಹೀಗಾಗಿ 6 ಕಡೆ ಚೆಕ್ ಪೋಸ್ಟ್ ಮಾಡಲಾಗಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಮೈಲಾಪುರ ಮಲ್ಲಯ್ಯನ ಜಾತ್ರೆ ಭರ್ಜರಿಯಾಗಿ ನಡೆಯಲಿದೆ.