ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ 2ನೇ ಅಲೆ ಎದ್ದಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರ ಪಾಲಿಸಬೇಕು. ಇಲ್ಲದೆ ಹೋದ್ರೆ ದಂಡ ಹಾಕಲಾಗುತ್ತೆ. ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಮುಖ್ಯಮಂತ್ರಿ, ಆರೋಗ್ಯ ಸಚಿವರು ಸೇರಿ ಕೋವಿಡ್ 2ನೇ ಅಲೆ ಬಗ್ಗೆ ದಿನಕೊಂದು ಹೇಳಿಕೆ ನೀಡುತ್ತಿದ್ದಾರೆ. ಇಷ್ಟೆಲ್ಲ ಹೇಳುವ ಸರ್ಕಾರ, ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭೆ ಉಪ ಚುನಾವಣೆ ಸಂಬಂಧ ಶನಿವಾರ ಬೃಹತ್ ಸಮಾವೇಶ ನಡೆಸಿದೆ.
ಸಿಎಂ ಬಿಎಸ್ವೈ, ಡಿಸಿಎಂ ಕಾರಜೋಳ, ಸವದಿ, ಸಚಿವರಾದ ಕೆ.ಎಸ್ ಈಶ್ವರಪ್ಪ, ಬಿ.ಶ್ರೀರಾಮುಲು, ಸಂಸದ ಕರಡಿ ಸಂಗಣ್ಣ, ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರ ರ್ಯಾಲಿ ಬಸವೇಶ್ವರ ಸರ್ಕಲ್ ನಿಂದ ಸಮಾವೇಶದ ಜಾಗದವರೆಗೂ ನಡೆಯಿತು. ಸಮಾವೇಶದಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ಜನರನ್ನ ಸೇರಿಸಲಾಗಿತ್ತು. ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡುತ್ತಿರುವ ಸರ್ಕಾರ, ರಾಜಕೀಯ ಸಮಾವೇಶದಲ್ಲಿ ಸಾವಿರಾರು ಜನರನ್ನ ಸೇರಿಸುತ್ತಿದ್ದೆಯಲ್ಲ ಇದಕ್ಕೆ ಯಾರು ಹೊಣೆ ಅನ್ನೋ ಪ್ರಶ್ನೆ ಎದ್ದಿದೆ.
ಜನ ಸಮಾನ್ಯರ ಮದುವೆ, ಶುಭ ಕಾರ್ಯಗಳಿಗೆ ನಿಯಮ ಹೇರುತ್ತಿದೆ. ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಲು ಬಿಡುತ್ತಿಲ್ಲ. ಮಾಸ್ಕ್ ಧರಿಸಿಲ್ಲವೆಂದು ನಗರಗಳಲ್ಲಿ ದಂಡ ವಸೂಲಿ ನಡೆದಿದೆ. ಇಷ್ಟೆಲ್ಲ ಮಾಡುವ ಸರ್ಕಾರ ರಾಜಕೀಯ ಸಮಾವೇಶಗಳ ಬಗ್ಗೆ ಏನು ಹೇಳುತ್ತೆ ಎನ್ನುತ್ತಿದ್ದಾರೆ ಸಾರ್ವಜನಿಕರು.