ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯುವ ಪರೇಡ್ ನಲ್ಲಿ ಸ್ತಬ್ಧ ಚಿತ್ರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಇಲ್ಲದ ನಿಯಮದ ಬಗ್ಗೆ ಪ್ರಸ್ತಾಪಿಸಿ ಪೇಚೆಗೆ ಸಿಲುಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ.
ಕೇರಳ ಸರ್ಕಾರದ ಸಲ್ಲಿಸಿದ್ದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಅಲ್ದೇ, ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ್ ಬೋಸ್ ಅವರ ಸ್ತಬ್ಧ ಚಿತ್ರವನ್ನು ಸಹ ತಿರಸ್ಕರಿಸಲಾಗಿದೆ. ಈ ಬಗ್ಗೆ ರಾಜಕೀಯ ಮೇಲಾಟುಗಳು ನಡೆದಿದ್ದು, ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿರುವ ವಿಚಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿವೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರೆ ಸತತವಾಗಿ 13ನೇ ಬಾರಿಗೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆ ಆಗಿದೆ. ಇದು ಸಂತಸದ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ. ಸಚಿವ ಸುನೀಲ್ ಕುಮಾರ್ ಹೇಳಿದಂತೆ 3 ವರ್ಷಕ್ಕೊಮ್ಮೆ ಆಯ್ಕೆ ಆಗುವ ಹಾಗಿದ್ದರೆ ಸತತವಾಗಿ 13 ನೇ ಬಾರಿಗೆ ಕರ್ನಾಟಕ ಸ್ತಬ್ಧಚಿತ್ರ ಆಯ್ಕೆ ಆಗಲು ಹೇಗೆ ಸಾಧ್ಯ? ಇನ್ನು ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ ಮಾಡಿರುವ ಕೇಂದ್ರ ಸರ್ಕಾರ, ಎಲ್ಲಿಯೂ ಮೂರು ವರ್ಷದ ನಿಯಮದ ಕುರಿತು ಪ್ರಸ್ತಾಪಿಸಿಲ್ಲ. ಒಂದು ವೇಳೆ ನಿಯಮ ಇದ್ದರೆ ಶಂಕರಾಚಾರ್ಯರ ಸ್ತಬ್ಧಚಿತ್ರ ನಿರ್ಮಿಸಲು ಯಾಕೆ ಸೂಚಿಸುತಿತ್ತು ಎಂದು ಪ್ರಶ್ನಿಸಿದ್ದು, ಇದು ಮತ್ತೊಂದು ರೀತಿಯ ಚರ್ಚೆಗೆ ಕಾರಣವಾಗಿದೆ.