ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಲ್ಲೆಡೆ 2023ರ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ, ಈ ವೇಳೆ ರಾಜ್ಯದ ಹಲವು ಭಾಗಗಳಲ್ಲಿ ದುರಂತ ಸಂಭವಿಸಿದ್ದು ಸುಮಾರು 16 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಂಜುನಾಥ್ ಎಂಬಾತ ಗಾಳಿಯಲ್ಲಿ ಗುಂಡು ಹೊಡೆಯಲು ಹೋದಾಗ ಮಿಸ್ ಫೈರ್ ಆಗಿ ಮಗನ ಸ್ನೇಹಿತ ವಿನಯ್ ಅನ್ನೋ ಯುವಕನಿಗೆ ಗುಂಡು ಬಿದ್ದಿದೆ. ಇದರಿಂದ ಹೃದಯಾಘಾತವಾಗಿ ಮಂಜುನಾಥ್ ಮೃತಪಟ್ಟರೆ ಭಾನುವಾರ ರಾತ್ರಿ ವಿನಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಸಿಲಿಕಾನ್ ಸಿಟಿಯ ಕೊಟ್ಟಿಗೆಪಾಳ್ಯದಲ್ಲಿ ಒಡಿಶಾ ಮೂಲದ ಬಾಪಿ ಎಂಬಾತ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾನೆ. ಅಂಕೋಲಾ ಬಳಿ ನಡೆದ ಬಸ್, ಕಾರ್ ಅಪಘಾತದಲ್ಲಿ ನಾಲ್ವರು, ಬೆಳ್ತಂಗಡಿಯ ಗೋಳಿಯಂಗಡಿಯಲ್ಲಿ ಇಬ್ಬರು, ಹಾಸನದಲ್ಲಿ ಓರ್ವ, ಗುಡ್ಡದಹಳ್ಳಿಯಲ್ಲಿ ಲಾರಿ ಡಿಕ್ಕಿಯಾಗಿ ಓರ್ವ, ಕಿತ್ತೂರಿನಲ್ಲಿ ಕಾರು ಡಿಕ್ಕಿಯಾಗಿ ಅಕ್ಷತಾ ಹುಲಿಕಟ್ಟೆ ಅನ್ನೋ ಯುವತಿ, ಸಂಸದ ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹೀಗೆ ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಡೆದ ಅನುಹಾತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ 2023ರ ಹೊಸ ವರ್ಷದ ಆರಂಭದಲ್ಲಿ ಸಾವು, ನೋವು ಸಂಭವಿಸಿದೆ.