ಮುಂಬೈ: ಜಾತಿ ನಿಂದನೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ 26 ವರ್ಷದ ವೈದ್ಯೆ ಪಾಯಲ್ ತದ್ವಿ ಕೇಸಿಗೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ಅಂಕಿತಾ ಖಂಡೆವಾಲ್ ಳನ್ನ ಅಗ್ರಿಪ್ಪಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದ್ಲು ಹೇಮಾ ಅಹುಜಾಳನ್ನ ರಾತ್ರಿ ಹಾಗೂ ಭಕ್ತಿ ಮೆಹರ್ ಳನ್ನ ಸಂಜೆ ಅರೆಸ್ಟ್ ಮಾಡಲಾಗಿದೆ. ಪಾಯಲ್ ಸೂಸೈಡ್ ವಿಚಾರಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು ಬಂಧನಕ್ಕೂ ಮೊದ್ಲೇ ಈ ಮೂವರು ಬೇಲ್ ಗೆ ಅರ್ಜಿ ಸಲ್ಲಿಸಿದ್ದರು ಅನ್ನೋದು ತಿಳಿದು ಬಂದಿದೆ. ಆದ್ರೆ, ಈಗಾಗ್ಲೇ ಈ ಮೂವರ ಮೇಲೆ ಎಸ್ಸಿ ಮತ್ತು ಬಡಕಟ್ಟು ಕಾಯ್ದೆ, ಕಿರುಕುಳ ಕಾಯ್ದೆ, 306ರ ಐಟಿ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
ಜಲ್ಗಾಂವ್ ಜಿಲ್ಲೆಯ ವೈದ್ಯೆ ಪಾಯಲ್ ತದ್ವಿ, ಸ್ತ್ರೀರೋಗ ತಜ್ಞೆ ಅಧ್ಯಯನಕ್ಕಾಗಿ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ 2018ರಲ್ಲಿ ಸೇರಿಕೊಂಡಿದ್ದಳು. ಕೆಲ ತಿಂಗಳುಗಳಿಂದ ಇಲ್ಲಿನ ಸೀನಿಯರ್ಸ್ ಪಾಯಲ್ ಗೆ ಜಾತಿ ನಿಂದನೆ ಮೂಲಕ ಕಿರುಕುಳ ಕೊಡಲು ಶುರು ಮಾಡಿದ್ರಂತೆ. ಈ ಬಗ್ಗೆ ಆಕೆ ತನ್ನ ಹೆತ್ತವರ ಬಳಿ ಹಾಗೂ ಪತಿ ಬಳಿ ಹೇಳಿದ್ದಳಂತೆ.
ಮಗಳಿಗೆ ಕಿರುಕುಳ ನೀಡ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆಕೆಯ ಹೆತ್ತವರು ಮತ್ತು ಪತಿ ಕಾಲೇಜು ಆಡಳಿತ ಮಂಡಳಿಗೆ ದೂರ ಸಹ ನೀಡಿದ್ದಾರೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಕಾಲೇಜು ಆಡಳಿತ ಮಂಡಳಿ ಸುಮ್ಮನಾಗಿದೆ. ಹೀಗಾಗಿ ಪಾಯಲ್ ಗೆ ಕಿರುಕುಳ ಕೊಡುವುದು ಮುಂದುವರೆದಿದೆ. ಇದರಿಂದ ನೊಂದ ವೈದ್ಯೆ ಕಳೆದ ಎರಡು ದಿನಗಳ ಹಿಂದೆ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.