ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರು ರಾಜಕಾರಣಿಯೂ ಹೌದು. ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿ ಆ ಮೂಲಕ ರಾಜಕೀಯದಲ್ಲಿ ಬದಲಾವಣೆ ತರಬೇಕು ಎಂದು ಹೊರಟಿದ್ದಾರೆ. ಆದರೆ, ಅವರು ಚುನಾವಣಾ ರಾಜಕೀಯಕ್ಕೆ ಮಾತ್ರ ಬರುತ್ತಿಲ್ಲ. 2018ರಲ್ಲಿಯೇ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದರೂ, ಇದುವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ, ಜನರು ಮಾತ್ರ ಅವರ ಕೈ ಹಿಡಿಯಲಿಲ್ಲ. ಪಾರದರ್ಶಕವಾದ ಆಡಳಿತ. ಕಾರ್ಮಿಕರು, ಬಡವರ ಪರವಾದ ಸರ್ಕಾರ, ಆರೋಗ್ಯ, ಶಿಕ್ಷಣ ಎಲ್ಲರಿಗೂ ಸಿಗಬೇಕು. ಶಾಸಕ ಅಂದರೆ ನೀವು ಸಂಬಳ ಕೊಟ್ಟು ನಿಮ್ಮ ಕೆಲಸ ಮಾಡಿಸಿಕೊಳ್ಳುವ ಜನಪ್ರತಿನಿಧಿ ಎಂದೆಲ್ಲ ಹೇಳುವ ಉಪೇಂದ್ರ, ಇದುವರೆಗೂ ತಮ್ಮ ಪಕ್ಷದ ಪರವಾಗಿ ರಾಜ್ಯವ್ಯಾಪಿ ಸಂಚಾರವೇ ಮಾಡಿಲ್ಲ. ತಂತ್ರಜ್ಞಾನ ಬೆಳೆದಿದೆ. ಇದರ ಮೂಲಕ ಎಲ್ಲರನ್ನು ನಾನು ಸಂಪರ್ಕಿಸುತ್ತೇನೆ ಅನ್ನೋದು ಎಷ್ಟು ಕೈ ಹಿಡಿಯುತ್ತೆ ಅನ್ನೋದು ಜನರ ಮಾತು.
ಸದಾ ಒಂದಲ್ಲ ಒಂದು ಸುದ್ದಿ ವಾಹಿನಿಯಲ್ಲಿ ಸಂದರ್ಶನ ನಡೆಯುತ್ತಲೇ ಇರುತ್ತೆ. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಇಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇನೆ ಎಂದು ಹೇಳಿಲ್ಲ. ಜನರ ಬಳಿ ಹೋಗದೆ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳದೆ, ಬರೀ ಟಿವಿಯಲ್ಲಿ ಮಾತನಾಡಿದರೆ ಆಯ್ತಾ ಎಂದು ಮತದಾರರು ಕೇಳುತ್ತಿದ್ದಾರೆ.
ಚುನಾವಣಾ ರಾಜಕೀಯ ಏನು ಅನ್ನೋದು ಅರ್ಥವಾಗಬೇಕಾದರೆ ಸ್ಪರ್ಧೆ ಮಾಡಲೇಬೇಕು. ಸ್ಪರ್ಧೆ ಮಾಡದೆ ಬರೀ ಮಾತಿನಿಂದ ಬದಲಾವಣೆ ಸಾಧ್ಯವಿಲ್ಲ. ಕಡೆ ಪಕ್ಷ ಕೆಆರ್ ಎಸ್ ಪಕ್ಷದವರು ಮಾಡುತ್ತಿರುವಷ್ಟು ಕ್ಷೇತ್ರಕಾರ್ಯ ಮಾಡುತ್ತಿಲ್ಲವೆಂದು ಅವರ ಅಭಿಮಾನಿಗಳೆ ಮಾತನಾಡಿಕೊಳ್ಳುತ್ತಿರುವುದು ಮಾತ್ರ ಸತ್ಯ.