ಪ್ರಜಾಸ್ತ್ರ ಸುದ್ದಿ
ಸಿಂದಗಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ ಕೊನೆಯ ಸ್ಥಾನದಲ್ಲಿದ್ರೂ, ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 9ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಹಂಚಿಕೊಂಡಿದ್ದಾರೆ. ಈ ಮೂಲಕ ಉತ್ತಮ ಸಾಧನೆ ಮಾಡಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಿಂದಗಿ ಪಟ್ಟಣದ ಜ್ಞಾನ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ ಹಾಗೂ ದೇವರನಾವದಗಿಯ ಕೆ.ಜಿ ಗುಗ್ಗರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರೀತಿ ನಾರಾಯಣಪುರ, 600ಕ್ಕೆ 586 ಅಂಕ ಪಡೆದು, ಶೇಕಡ 97.66ರಷ್ಟು ಸಾಧನೆ ಮಾಡಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಹಂಚಿಕೊಂಡಿದ್ದಾರೆ.
ರೈತ ಕುಟುಂಬದ ಮಗನಾಗಿರುವ ವಿದ್ಯಾರ್ಥಿ ಮಾಳಪ್ಪ, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದವನಾಗಿದ್ದಾನೆ. ಆದ್ರೆ, ಸಿಂದಗಿಯಲ್ಲಿ ರೂಮ್ ಮಾಡಿಕೊಂಡು, ಜ್ಞಾನ ಭಾರತಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ. ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಾಳಪ್ಪ, ಕನ್ನಡ 100, ಶಿಕ್ಷಣ ಶಾಸ್ತ್ರ 100, ಇತಿಹಾಸ 98, ಹಿಂದಿ 98, ಸಮಾಜಶಾಸ್ತ್ರ 97, ರಾಜ್ಯಶಾಸ್ತ್ರದಲ್ಲಿ 93 ಅಂಗಳನ್ನ ಪಡೆಯುವ ಮೂಲಕ 600ಕ್ಕೆ 586 ಅಂಕ ಪಡೆದಿದ್ದಾನೆ.
ಪ್ರೀತಿ ನಾರಾಯಣಪುರ ಬಡತನದಲ್ಲಿಯೇ ಬೆಳೆದ ವಿದ್ಯಾರ್ಥಿನಿ. ಇವರ ತಂದೆಗೆ 6 ಜನ ಹೆಣ್ಮಕ್ಕಳಲ್ಲಿ ಇವಳು ಕೊನೆಯವಳು. ಈಕೆಯ ಸಾಧನೆ ಕುಮಸಗಿಯ ಕಮಲವಿದ್ದಂತೆ. ವಿದ್ಯಾರ್ಥಿನಿಗೆ ಕಾಲೇಜು ಆಡಳಿತ ಮಂಡಳಿಯಿಂದ ಶುಭಾಶಯ ಕೋರಲಾಗಿದೆ.
ಮಲ್ಲಿಕಾರ್ಜುನ ಜಿ ಉಪ್ಪಾರ, ಪ್ರಾಚಾರ್ಯರು, ಕೆ.ಜಿ ಗುಗ್ಗರಿ ಕಾಲೇಜ್
ಇನ್ನು ತಾಲೂಕಿನ ಕುಮಸಗಿ ಗ್ರಾಮದ ವಿದ್ಯಾರ್ಥಿನಿ ಪ್ರೀತಿ ನಾರಾಯಣಪುರ ಸಹ 600ಕ್ಕೆ 586 ಅಂಕಗಳನ್ನ ಪಡೆದಿದ್ದಾಳೆ. ಕನ್ನಡ 97, ಹಿಂದಿ 97, ಇತಿಹಾಸ 96, ಸಮಾಜಶಾಸ್ತ್ರ 99, ರಾಜ್ಯಶಾಸ್ತ್ರ 97, ಶಿಕ್ಷಣಶಾಸ್ತ್ರ 100 ಅಂಕ ಪಡೆಯುವ ಮೂಲಕ ಶೇಕಡ 97.66ರಷ್ಟು ಸಾಧನೆ ಮಾಡಿದ್ದಾಳೆ.
ಪ್ರೀತಿ ನಾರಾಯಣಪುರ ಸಹ ರೈತ ಕುಟುಂಬದಲ್ಲಿ ಬೆಳೆದ ಹುಡಗಿ. ಇವರ ತಂದೆಗೆ 6 ಜನ ಹೆಣ್ಮಕ್ಕಳು. ಪ್ರೀತಿ ಕೊನೆಯ ಮಗಳಾಗಿದ್ದು, ಇವಳು ಸಹ ಬಡತನದಲ್ಲಿಯೇ ಬೆಳೆದು ಓದಿ ಇಷ್ಟೊಂದು ಸಾಧನೆ ಮಾಡಿದ್ದಾಳೆ. ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಗೆ ಜಿಲ್ಲೆಯಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ.
ಕಡು ಬಡತನದಿಂದ ಬಂದ ವಿದ್ಯಾರ್ಥಿ ಮಾಳಪ್ಪ ಹೊಸಮನಿ, ಸ್ವಂತ ಪರಿಶ್ರಮ ಹಾಗೂ ಕಾಲೇಜಿನ ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಸಾಧನೆ ಮಾಡಿದ್ದಾನೆ. ಶಿಕ್ಷಕ ಬಳಗ ಹಾಗೂ ಕಾಲೇಜು ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಜಗದೀಶ ಸಿ ಪಾಟೀಲ, ಪ್ರಾಚಾರ್ಯರು, ಜ್ಞಾನ ಭಾರತಿ ಪಿಯು ಕಾಲೇಜ್, ಸಿಂದಗಿ