ಪ್ರಜಾಸ್ತ್ರ ಅಪರಾಧ ಸುದ್ದಿ
ರಾಮನಗರ: ಅತ್ಯಾಚಾರ ಹಾಗೂ ಕೊಲೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದ ಯುವತಿಯ ಹತ್ಯೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 19 ವರ್ಷದ ಹೇಮಲತಾ ಅನ್ನೋ ಯುವತಿಯ ಹತ್ಯೆಯ ಹಿಂದೆ ತಂದೆ ಹಾಗೂ ತಮ್ಮನ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಇದೀಗ ಕೊಲೆಯಾದ ಹೇಮಲತಾ ತಂದೆ ಕೃಷ್ಣಪ್ಪ, ತಮ್ಮ ಯೋಗೇಶ ಹಾಗೂ ಈತನ ಸ್ನೇಹಿತ ಬಾಲಾಪರಾಧಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ಮಾತ್ನಾಡಿರುವ ಕೇಂದ್ರ ವಲಯದ ಐಜಿಪಿ ಸೀಮಂತಕುಮಾರ ಸಿಂಗ್, ಇದೊಂದು ಮರ್ಯಾದಾ ಹತ್ಯೆಯಾಗಿದೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಕುದೂರು ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವರ್ಷ ಓದುತ್ತಿದ್ದ ಹೇಮಲತಾ, ಅದೆ ಗ್ರಾಮದ ಪುನೀತ ಅನ್ನೋ ಯುವಕನ್ನ ಪ್ರೀತಿ ಮಾಡ್ತಿದ್ದಳಂತೆ. ಅನ್ಯಜಾತಿಯ ಯುವಕನನ್ನ ಪ್ರೀತಿಸ್ತಿರುವುದಕ್ಕೆ ಮನೆಯವರು ಬುದ್ದಿವಾದ ಹೇಳಿದ್ದಾರೆ. ಬಳಿಕ ತಂದೆ ಹಾಗೂ ತಮ್ಮ ಘಟನೆಗೂ ಮೂರು ದಿನ ಮೊದ್ಲು ಆಕೆಯನ್ನ ಜಮೀನಿಗೆ ಕರೆದುಕೊಂಡು ಬಂದು ತಿಳಿ ಹೇಳುವ ಸಂದರ್ಭದಲ್ಲಿ ಸಹೋದರ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಮುಂದೆ ಈಕೆಯ ತಂದೆಯ ಸಹೋದರನ ಜಮೀನಿನಲ್ಲಿ ಶವವನ್ನ ಹೂತು ಹಾಕಿದ್ದಾರೆ. ಮೂರು ದಿನಗಳ ಬಳಿಕ ದೂರು ನೀಡಿದ್ದಾರೆ. ಹೀಗಾಗಿ ಅಕ್ಟೋಬರ್ 10ರಂದು ಹೇಮಲತಾಗಾಗಿ ಹುಡುಕಾಟ ನಡೆಸ್ತಿರುವಾಗ, ಜಮೀನಿನ ಹತ್ತಿರ ಆಕೆಯ ಒಂದು ಚಪ್ಪಲಿ ಸಿಕ್ಕಿದೆ. ಮುಂದೆ ರಕ್ತಸಿಕ್ತ ಕಲ್ಲು ಸಿಕ್ಕಿದೆ. ಹೀಗೆ ಹುಡುಕಾಟ ನಡೆಸಿದಾಗ ಆಕೆಯ ದೊಡ್ಡಪ್ಪನ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ಆಗ ಪೋಷಕರು ಪ್ರೇಮಿ ಪುನೀತ ಮೇಲೆ ಕೊಲೆಯ ಆರೋಪ ಹೊರಿಸಿದ್ರು. ಇದೀಗ ಕೃತ್ಯ ನಡೆಸಿದ್ದು ಯಾರು ಅನ್ನೋದು ಬೆಳಕಿಗೆ ಬಂದಿದೆ.