ಪ್ರಜಾಸ್ತ್ರ ಸುದ್ದಿ
ರಾಮನಗರ: ಪ್ರೀತಿ, ಪ್ರೇಮ ಎನ್ನುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಇರುವುದು ಮುಖ್ಯ. ಸ್ವಲ್ಪ ಮೈಮರೆತರೆ ಏನಾಗುತ್ತೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಪ್ರಿಯಕರನನ್ನು ನಂಬಿದ ಯುತಿಯ ಸ್ಥಿತಿ ಇಲ್ಲಿ ಏನಾಗಿದೆ ನೋಡಿ.
ರಾಮನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿಯೊಂದಿಗೆ ಮಂಜು ಎಂಬಾತ ಸ್ನೇಹ ಬೆಳೆಸಿದ್ದಾನೆ. ನಂತರ ಸಲುಗೆ ಬೆಳೆದಿದೆ. ಯುವತಿಯೊಂದಿಗೆ ಇದ್ದ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ನಂತರ ಸ್ನೇಹಿತ ರವಿ ಮುಂದೆ ಇದನ್ನೆಲ್ಲ ಹೇಳಿದ್ದಾನೆ. ವಿವಾಹಿತನಾಗಿರುವ ರವಿ ಸ್ನೇಹಿತ ಮಂಜುಗೆ ನೀನು ನೋಡಲು ಚೆನ್ನಾಗಿದಿ. ಬೇರೆ ಹುಡುಗಿಯರನ್ನು ಪಟಾಯಿಸಬಹುದು. ಇವಳನ್ನು ನನಗೆ ಬಿಟ್ಟುಕೊಡು ನಾನು ಮದುವೆಯಾಗುತ್ತೇನೆ ಎಂದಿದ್ದಾನೆ.
ರವಿ ಮಾತು ಕೇಳಿದ ಮಂಜು, ಸೆಪ್ಟೆಂಬರ್ 19ರಂದು ವಿನಾಯಕ ನಗರದ ಆಂಜನೇಯ ದೇವಸ್ಥಾನದ ಹತ್ತಿರ ಬರಲು ಯುವತಿಗೆ ಹೇಳಿದ್ದಾನೆ. ನಂತರ ರವಿ ಜೊತೆಗೆ ಕಳಿಸಲು ನೋಡಿದ್ದಾನೆ. ಆಕೆ ಒಪ್ಪದಿದ್ದಾಗ ಫೋಟೋ ತೋರಿಸಿ ಬೆದರಿಸಿದ್ದಾನೆ. ಹೀಗಾಗಿ ಯುವತಿ ರವಿ ಜೊತೆಗೆ ಹೋಗಿದ್ದಾಳೆ. ನಂತರ ತಾಯತದ ರೀತಿಯ ದಾರ ಕಟ್ಟಿ ನಾನು ನಿನ್ನ ಮದುವೆಯಾಗಿದ್ದೇನೆ ಎಂದು ಹೇಳಿ, ಚಾಮರಾಜನಗರದ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅವರ ಮನೆಗೆ ಸೇರಿಸಿಕೊಳ್ಳದಿದ್ದಾಗ ತುಮಕೂರಿಗೆ ಬಂದಿದ್ದಾನೆ.
ಯುವತಿ ನಾಪತ್ತೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆಗ ಮಂಜು ಸಿಕ್ಕಿಬಿದ್ದಿದ್ದಾನೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಜೊತೆಗೆ ಕಳಿಸಿಕೊಟ್ಟಿರುವ ವಿಚಾರ ಹೇಳಿದ್ದಾನೆ. ಅಲರ್ಟ್ ಆದ ಪೊಲೀಸರು ರವಿಯ ಹೆಡಿಮುರಿ ಕಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಇದೀಗ ಕಿರಾತಕರಾದ ಮಂಜು, ರವಿ ಪೊಲೀಸರ ಅತಿಥಿಯಾಗಿದ್ದಾರೆ.