ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ರಚಿತಾ ರಾಮ್ ನಟನೆಯ ಕ್ರಾಂತಿ ಸಿನಿಮಾದ 2ನೇ ಸಾಂಗ್ ರಿಲೀಸ್ ಗಾಗಿ ಕಳೆದ ಭಾನುವಾರ ಹೊಸಪೇಟೆಗೆ ಹೋದ ಸಂದರ್ಭದಲ್ಲಿ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಈ ಕೃತ್ಯವನ್ನು ಇಡೀ ಕನ್ನಡ ಚಿತ್ರರಂಗದ ನಟ, ನಟಿಯರು ಖಂಡಿಸಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಈ ಘಟನೆ ಬಗ್ಗೆ ಕಿಚ್ಚ ಸುದೀಪ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಂಡಾಯ ಯಾವಾಗಲೂ ಉತ್ತರವಲ್ಲ ಅನ್ನೋ ಹೆಡ್ ಲೈನ್ ನೊಂದಿಗೆ 3 ಪುಟಗಳ ಪತ್ರ ಬರೆದು ಚಿತ್ರರಂಗದ ಸ್ನೇಹಿತನ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ನೆಲ, ಭಾಷೆ, ಸಂಸ್ಕೃತಿ ಪ್ರೀತಿ ಹಾಗೂ ಗೌರವದೊಂದಿಗಿದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಪ್ರತಿಯೊಬ್ಬರಿಗೂ ಅವರದೆಯಾದ ಗೌರವ ಇರುತ್ತೆ. ಆ ವಿಡಿಯೋ ನೋಡಿ ನಾನು ತುಂಬಾ ವಿಚಲಿತನಾಗಿದ್ದೇನೆ ಎಂದಿದ್ದಾರೆ.
ಇದು ನಿಜಕ್ಕೂ ಅನ್ಯಾಯ. ಆ ಸಂದರ್ಭದಲ್ಲಿ ದರ್ಶನ್ ನಡೆದುಕೊಂಡ ರೀತಿಗೆ ಸಹಮತವಿದೆ. ಅವರ ಹಾಗೂ ಪುನೀತ್ ಅಭಿಮಾನಿಗಳ ನಡುವಿನ ಸಂದರ್ಭ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಈ ರೀತಿಯ ಕೃತ್ಯವನ್ನು ಪುನೀತ್ ಒಪ್ಪಿಕೊಳ್ಳುತ್ತಿದ್ದರೆ, ಬೆಂಬಲಿಸುತ್ತಿದ್ದರೆ ಎಂದು ಅವರ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ಈ ಒಂದು ಘಟನೆ ಪುನೀತ್ ಅವರ ಮೇಲಿನ ಪ್ರೀತಿ, ಗೌರವಗೆ ಧಕ್ಕೆ ತರಲು ಸಾಧ್ಯವಿಲ್ಲ. ದರ್ಶನ್ ನಮ್ಮ ಚಿತ್ರರಂಗಕ್ಕೆ, ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಘಟನೆ ನನಗೆ ತುಂಬಾ ನೋವು ತಂದಿದೆ. ಕರ್ನಾಟಕ ಹಾಗೂ ಕನ್ನಡ ಎಲ್ಲೆಡೆ ಸಾಕಷ್ಟು ಗೌರವವನ್ನು ಉಳಿಸಿಕೊಂಡಿದೆ. ಇದು ಎಲ್ಲದಕ್ಕೂ ಬಂಡಾಯ ಉತ್ತರವಲ್ಲ ಅನ್ನೋ ಸಂದೇಶ ನೀಡುತ್ತೆ. ನಟರ ನಡುವೆ, ಅಭಿಮಾನಿಗಳ ನಡುವೆ ವ್ಯತ್ಯಾಸ ಇರುತ್ತೆ ಅನ್ನೋದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಯಾರೂ ಅದರ ಬಗ್ಗೆ ಮಾತನಾಡಲ್ಲ. ಪುನೀತ್ ಹಾಗೂ ದರ್ಶನ್ ಆಪ್ತನಾಗಿ ಅವರ ಸ್ಥಾನ ಮಾನ, ಸ್ವಾತಂತ್ರ್ಯದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ.
ನಾನು ಏನು ಮಾತನಾಡಿದ್ದೇನೆ ಅನ್ನೋದು ಮರೆತು ಬಿಡಿ. 27 ವರ್ಷಗಳಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಇಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ ಎಂದು ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ದರ್ಶನ್ ನೋವು ತಮ್ಮ ನೋವು ಎನ್ನುವ ಮಾತುಗಳನ್ನು ನಟ ಕಿಚ್ಚ ಸುದೀಪ್ ಆಡುವ ಮೂಲಕ, ಸ್ಟಾರ್ ವಾರ್ ಅನ್ನೋದೆಲ್ಲ ಬೇಡ ಅನ್ನೋ ಮಾತುಗಳನ್ನು ಹೇಳಿದ್ದಾರೆ.