ಸಿಂದಗಿ: ಸಂತ ಕವಿ ಸರ್ವಜ್ಞರ ಜಯಂತಿಯನ್ನ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಚರಿಸಲಾಯ್ತು. ಸಮಾಜದ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಈ ವೇಳೆ ವಿಶೇಷ ಉಪನ್ಯಾಸ ನೀಡಿದ ಹುಣಶ್ಯಾಳದ ಸರ್ಕಾರಿ ಉರ್ದು ಪ್ರೌಢ ಶಾಲೆ ಶಿಕ್ಷಕ ಶಂಕರ ಕುಂಬಾರ, 16-17ನೇ ಶತಮಾನದಲ್ಲಿ ಬಾಳಿ ಬದುಕಿದ ಸರ್ವಜ್ಞರ ವಚನಗಳು ಇಂದಿಗೂ ಎಷ್ಟೊಂದು ಪ್ರಸ್ತುತವಾಗಿವೆ ಅನ್ನೋದರ ಕುರಿತು ಮಾತ್ನಾಡಿದ್ರು. ಬಸವರಸ ಹಾಗೂ ಕುಂಬಾರ ಮಾಳೆ ದಂಪತಿಗೆ ಜನಿಸಿದ ಸರ್ವಜ್ಞ, ತ್ರಿಪದಿಗಳ ಮುಖೇನ ಸಮಾಜವನ್ನ ತಿದ್ದುವ ಕೆಲಸವನ್ನ ಮಾಡಿದ್ದಾರೆ ಅಂತಾ ಹೇಳಿದ್ರು.
ಮುಖ್ಯ ಅತಿಥಿಗಳಾಗಿ ಮಾತ್ನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಈ ಜಯಂತಿಗಳನ್ನ ಯಾಕೆ ಮಾಡ್ತಾರೆ ಅಂತಾ ನಮಗೆ ಬೇಸರವಾಗಿದೆ ಎಂದ ಅವರು, ಸರ್ಕಾರದ ಈ ಕಾರ್ಯದಿಂದ ಒಳ್ಳೆಯದಾಗಿದೆ ಎನ್ನುವ ಮೂಲಕ ಗೊಂದಲ ಮೂಡಿಸಿದ್ರು. ಇನ್ನು ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ, ಸಂತರ, ಶರಣರ ಶ್ರಮ ಅಳಿದು ಹೋಗಬಾರದು ಅನ್ನೋ ಕಾರಣಕ್ಕೆ ಜಯಂತಿಗಳನ್ನ ಆಚರಿಸಲಾಗ್ತಿದೆ. ಅವರ ಹೆಸರು ಉಳಿಸುವ ಕೆಲಸ ಮಾಡಬೇಕಿದೆ ಅಂತಾ ಹೇಳಿದ್ರು.
ಕೆ.ವಿ ಬ್ಯಾಡರ್, ಪಿಎಸ್ಐ ಎಸ್.ಹೆಚ್ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಸಯೀದ ಅಹ್ಮದ, ಶ್ರೀಶೈಲ ಕುಂಬಾರ, ಅಶೋಕ ಕುಂಬಾರ, ಚೇತನ, ಗಂಗಾಧರ ಸೋಮನಾಯ್ಕ, ಮಕಾಂದರ ಸೇರಿ ಅನೇಕರು ಭಾಗವಹಿಸಿದ್ರು. ಶಿರಸ್ತೇದಾರ್ ಸುರೇಶ ಮ್ಯಾಗೇರಿ ಸ್ವಾಗತಿಸಿದ್ರು. ಬಸವರಾಜ ಸೊಂಪುರ ನಿರೂಪಿಸಿ ವಂದಿಸಿದ್ರು.