ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಇದೀಗ ತೀವ್ರ ಚರ್ಚೆಯಲ್ಲಿರುವುದು ನಂದಿನಿ ಉಳಿಸಿ ಅಮುಲ್ ಓಡಿಸಿ ಅಭಿಯಾನ. ಕನ್ನಡಿಗರ ಹಮ್ಮೆಯಾಗಿರುವ ನಂದಿನಿ ಜಾಗದಲ್ಲಿ ಗುಜರಾತ್ ಮೂಲದ ಅಮುಲ್ ತಂದು ಕೂರಿಸುವುದಕ್ಕೆ ಕನ್ನಡಿಗರಾದ ನಾವು ಬಿಡುವುದಿಲ್ಲವೆಂದು ದೊಡ್ಡ ಹೋರಾಟ ಶುರುವಾಗಿದೆ. ಇದರಿಂದಾಗಿ ರಾಜಕೀಯ ಮೇಲಾಟಗಳು ನಡೆದಿವೆ.
ನಂದಿನಿ ಉಳಿಸಿ ಹೋರಾಟ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆಯಿದೆ. ಯಾಕಂದರೆ, ಬಿಜೆಪಿ ನಾಯಕರು ಅಮುಲ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಬಿಜೆಪಿ ಬಂಬಲಿಗರು ಸಹ ಅಮುಲ್ ಪರ ನಿಂತುಕೊಂಡಿದ್ದು, ರಾಜ್ಯದ ರೈತರ ವಿರೋಧಿ ಅನ್ನೋ ಕೂಗು ಜೋರಾಗಿದೆ.
ನಂದಿನಿ ಬ್ರ್ಯಾಂಡ್ ರಾಜ್ಯ ರೈತರ ಅಸ್ಮಿತೆ. ಇದನ್ನು ನಂಬಿ ಲಕ್ಷಾಂತರ ಜನರು ಜೀವನ ಮಾಡುತ್ತಿದ್ದಾರೆ. ಇತರೆ ರಾಜ್ಯಗಳ ಹಾಲು ಹಾಗೂ ಅದರ ಉತ್ಪನ್ನಗಳು ಹೇಗೆ ಮಾರಾಟವಾಗುತ್ತವೆಯೋ ಹಾಗೇ ಅಮುಲ್ ಸಹ ಆಗಲಿ. ಆದರೆ, ನಂದಿನಿ ಜಾಗವನ್ನು ಅಮುಲ್ ಆಕ್ರಮಿಸಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ಬಿಡುವುದಿಲ್ಲ ಎನ್ನುವ ಹೋರಾಟ ನಡೆದಿದೆ. ಇದರ ಪರಿಣಾಮ ಈಗಾಗ್ಲೇ ಸುಮಾರು 2 ಸಾವಿರ ಹೋಟೆಲ್ ಗಳಲ್ಲಿ ಅಮುಲ್ ಹಾಲು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಹೊತ್ತಿನಲ್ಲಿ ಈ ಹೋರಾಟ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಳ್ಳಾಗುವ ಸಾಧ್ಯತೆ ಹೆಚ್ಚು. ಬಿಜೆಪಿ ಬರೀ ಉತ್ತರದ ಪರವಾಗಿ ನಿಂತುಕೊಂಡು ಕರ್ನಾಟಕವನ್ನು ಅವರಿಗೆ ಮಾರಲು ಹೊರಟಿದೆ ಎಂದು ಈಗಾಗ್ಲೇ ಹೋರಾಟ ನಡೆದಿದೆ. ಆ ಸಾಲಿಗೆ ಈಗ ನಂದಿನಿ ಉಳಿಸಿ ಹೋರಾಟ ಸೇರಿಕೊಂಡಿದೆ. ಶೇ.40ರಷ್ಟು ಕಮಿಷನ್ ಸರ್ಕಾರ, ಸಚಿವರ ತಲೆದಂಡ, ಶಾಸಕರ ಜೈಲು ಪರೇಡ್ ಸೇರಿ ಹಲವು ವಿಚಾರಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಿದ್ದು, ಈಗ ನಂದಿನಿ ಬ್ರ್ಯಾಂಡ್ ಉಳಿಸಿ ಹೋರಾಟ ಮತ್ತಷ್ಟು ಸಂಕಷ್ಟ ತರುವುದು ಮಾತ್ರ ಸುಳ್ಳಲ್ಲ.