ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಧ್ಯ ರಾಜ್ಯದಲ್ಲಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ನಮ್ಮ ನೆಲದ ಸಂಸ್ಕೃತಿ ಸೇರಿ ನಮ್ಮತನವನ್ನು ಕಾಪಾಡುತ್ತಿರುವ ಪ್ರತಿಯೊಂದನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಭಾಷೆಯಿಂದ ಹಿಡಿದು ಉಡುಗೆ, ತೊಡುಗೆ, ಆಹಾರದ ತನಕ ಕನ್ನಡಿಗರ ಮೇಲೆ ಹೇರಿಕೆ ಆಗುತ್ತಿದೆ. ಇದಕ್ಕೆ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂದು ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈಗ ರಾಜ್ಯದ ಪ್ರತಿಷ್ಠಿತ ನಂದಿನ ಹಾಲಿನ ಬ್ರ್ಯಾಂಡ್ ಗೆ ಬದಲಾಗಿ ಗುಜರಾತಿ ಮೂಲದ ಅಮೂಲ್ ತಂದು ಮೆರೆಸಲು ಸರ್ಕಾರ ಸಜ್ಜಾಗಿದೆ. ಇದರ ವಿರುದ್ಧ ನಿಜವಾದ ಕನ್ನಡಿಗರು ಸಿಡಿದು ನಿಂತಿದ್ದು, ನಂದಿನ ಉಳಿಸಿ ಅಭಿಯಾನ ಶುರು ಮಾಡಿದ್ದಾರೆ. #GoBackAmul, #SaveNandini ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟರ್ ನಲ್ಲಿ ಅಭಿಯಾನ ಜೋರಾಗುತ್ತಿದೆ.
ಕೆಎಂಎಫ್ ಕನ್ನಡಿಗರ ಆಸ್ತಿ. ಕೋಟ್ಯಾಂತರ ರೈತರು ಕೆಎಂಎಫ್ ನಂಬಿ ಜೀವನ ಮಾಡುತ್ತಿದ್ದಾರೆ. ನಂದಿನಿ ಬ್ರ್ಯಾಂಡ್ ಅನ್ನೋ ದೇಶದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದೆ. ಆದರೆ, ಅದನ್ನು ಇಲ್ಲವಾಗಿಸಿ ಆ ಜಾಗಕ್ಕೆ ಅಮೂಲ್ ತಂದು ಕುರಿಸುವ ಪ್ರಯತ್ನ ನಡೆಸಿರುವ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ವಿಪಕ್ಷಗಳ ನಾಯಕರು ಸಹ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.