ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಹುಸಿ ದೇಶಭಕ್ತರಾದ ಸಾವರ್ಕರ್, ಹೆಡ್ಗೆವಾರ್ ಪಾಠವನ್ನು ತೆಗಿಯಿರಿ. ಯಾವ ಪಠ್ಯವನ್ನು ಬೋಧಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಲಿ. ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು ಎಂದು ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿದ ಪಠ್ಯ 500 ವರ್ಷಕ್ಕೆ ಹಿಂದಕ್ಕೆ ಕರೆದುಕೊಂಡು ಹೋಗಿದೆ. ವೈಚಾರಿಕತೆ ಇರಲಿಲ್ಲ. ಅಪಕ್ಷ ರೋಹಿತ್ ಚಕ್ರತೀರ್ಥ ಎಂಬುವವರನ್ನು ಬಿ.ಸಿ ನಾಗೇಶ್ ಅಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ಹೊಸ ಸರ್ಕಾರ ಬಂದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನು ಜಾರಿ ಮಾಡಬೇಕು.
ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿರುವುದು ಅಪಕ್ಷ ಹೇಳಿಕೆ. ಹಿಂದೂ, ಮುಸ್ಲಿಂ, ಕ್ರೈಸ್ತ್, ಜೈನ್, ಪಾರ್ಸಿ ಎಲ್ಲರನ್ನೂ ಒಳಗೊಳ್ಳುವುವುದು ಭಾರತೀಯತೆ. ಆರ್ ಎಸ್ಎಸ್ ವಿಚಾರ ಭಾರತೀಯತೆ ಅಲ್ಲ. ಶೇಕಡ 1.5ರಷ್ಟು ಜನರ ಭಾರತೀಯತೆ ಅಲ್ಲ ಎಂದು ತಿರುಗೇಟು ನೀಡಿದರು.
ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು. ರಾಷ್ಟ್ರಭಕ್ತ ಹೆಗ್ಡೆವಾರ್ ಪಾಠ ಇರಬಾರದು ಅನ್ನೋದು ಅಸಹಿಷ್ಣತೆ ಎಂದು ಕಿಡಿ ಕಾರಿದರು. ಕಾರ್ಲ್ ಮಾರ್ಕ್ಸ್, ಮಾವೋ ಪ್ರಜಾಪ್ರಭುತ್ವ ವಿರೋಧಿಗಳು. ಸೈದ್ಧಾಂತಿಕವಾಗಿ ಹೆಗ್ಡೆವಾರ್ ಅವರನ್ನು ವಿರೋಧಿಸಬಹುದು. ಆದರೆ, ಅವರ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ ಎಂದರು.