ನವದೆಹಲಿ: ಕೋವಿಡ್ 19 ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಸರ್ಕಾರ ಹೊಸದೊಂದು ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲವೆಂದು ಹೇಳಿದ್ದಾರೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅನ್ವಯ 50ಕ್ಕಿಂತ ಹೆಚ್ಚು ಜನ ಸೇರುವ ಗುಂಪುಗಳಿಗೆ ನಿಷೇಧ ಹೇರಿದ್ದಾರೆ.
ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗೂ ಇದು ಅನ್ವಯವಾಗಲಿದೆ. ಇದನ್ನ ಮೀರಿ ಗುಂಪು ಸೇರಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಈಗಾಗ್ಲೇ ಶಾಲಾ, ಕಾಲೇಜು, ಈಜುಕೋಳಗಳನ್ನ ಮುಚ್ಚಲಾಗಿದೆ. ಇಂದು ಜಿಮ್, ಕ್ಲಬ್, ಸ್ಪಾ ಸೆಂಟರ್ ಗಳನ್ನ ಮುಚ್ಚಲು ಆದೇಶ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನು 500 ಹಾಸಿಗೆಯ ಆಸ್ಪತ್ರೆಯನ್ನ ವ್ಯವಸ್ಥೆ ಮಾಡಲಾಗಿದೆ. ಕಳೆದ ವಾರ 68 ವರ್ಷದ ಮಹಿಳೆಯೊಬ್ಬರು ಕರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ರು.