ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಧಾನಸಭೆ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ನಡೆಯಲಿದೆ. ಆದರೆ, ಸಿಂದಗಿ ಹಾಗೂ ಹಾನಗಲ್ ನಲ್ಲಿ ಬಿಜೆಪಿ ಗೆಲ್ಲುವುದು ಸತ್ಯ. ಆ ಗೆಲುವಿನ ಅಂತರ ಎಷ್ಟೆಂದು ಇನ್ನೊಂದು ವಾರದಲ್ಲಿ ತಿಳಿಸುತ್ತೇನೆ ಎಂದು, ಚುನಾವಣೆ ಉಸ್ತುವಾರಿ, ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ಗೆಲ್ಲಲು ಏನು ಕಾರ್ಯರೂಪ ಸಿದ್ಧಪಡಿಸಿದ್ದೇವೋ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಸಿಂದಗಿ ಚುನಾವಣೆಯಲ್ಲಿ ಸಿದ್ಧಪಡಿಸಿದ್ದೇವೆ. ಅಕ್ಟೋಬರ್ 14ರಿಂದ ಅಧಿಕೃತ ಪ್ರಚಾರ ನಡೆಸುತ್ತೇವೆ. 10 ಮಹಾಶಕ್ತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. 6 ಜಿಲ್ಲಾ ಪಂಚಾಯ್ತಿ ಉಸ್ತುವಾರಿಯಲ್ಲಿ 4 ಜನ ಸಚಿವರು ಇರುತ್ತಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ ಅವರು ಬರಲಿದ್ದು, ಅವರೊಂದಿಗೆ ಶಾಸಕ ಪಿ.ರಾಜು ಹಾಗೂ ನಾನು ತಾಲೂಕಿನಾದ್ಯಂತ ಸಂಚರಿಸುತ್ತೇವೆ ಎಂದರು.
ಈ ವೇಳೆ ಉಪ ಚುನಾವಣಾ ಅಭ್ಯರ್ಥಿ ರಮೇಶ ಭೂಸನೂರ, ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ, ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ ಕೂಚಬಾಳ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಶ್ರೀಕಾಂತ ಕುಲ್ಕರ್ಣಿ, ಚಂದ್ರಶೇಖರ ಕೋಟೆ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸುದರ್ಶನ ಜಿಂಗಾಣಿ, ಗುರು ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.