ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನೀತಿಸಂಹಿತೆಯನ್ನು ಹಲವು ಬಾರಿ ಉಲ್ಲಂಘಿಸಿವೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಚುನಾವಣಾಧಿಕಾರಿಗಳು, ಭ್ರಷ್ಟ ಪಕ್ಷಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಚುನವಣಾ ಅಕ್ರಮಗಳ ಕುರಿತು ನಾವು ಚುನಾವಣಾಧಿಕಾರಿಗಳಿಗೆ ಸಾಕಷ್ಟು ಮಾಹಿತಿ ನೀಡಿದ್ದೇವೆ. ಆದರೆ, ಹೊರ ರಾಜ್ಯಗಳಿಂದ ಬಂದಿರುವ ಐಎಎಸ್ ಹಾಗೂ ಐಪಿಎಸ್ ಹುದ್ದೆಯ ಚುನವಣಾ ವೀಕ್ಷಕರು ಅಕ್ರಮಗಳನ್ನು ತಡೆಯುತ್ತಿಲ್ಲವೆಂದು ಆರೋಪಿಸಿದರು.ಇನ್ನು ಭ್ರಷ್ಟಾಚಾರವನ್ನು ಕೊನೆಗಾಣಿಸಲು ನಮ್ಮ ಪಕ್ಷ ‘ಒಂದು ವೋಟು ಒಂದು ನೋಟು’ ಅಭಿಯಾನ ಶುರು ಮಾಡಿದೆ. ದೇಣಿಗೆ, ರೊಟ್ಟಿ, ಹಣ್ಣು ನೀಡುವ ಮೂಲಕ ಜನರು ಬೆಂಬಲಿಸುತ್ತಿದ್ದಾರೆ. ಭ್ರಷ್ಟರನ್ನು ತಿರಸ್ಕರಿಸಿದರೆ ಮಾತ್ರ ರಾಜ್ಯಕೆ ಭವಿಷ್ಯವಿದೆ ಎಂದು ಹೇಳಿದರು.
ಕರೋನಾ ಕಾಯಿಲೆಯಿಂದ ಈಗಾಗಲೇ ಲಕ್ಷಾಂತರ ಜನ ಸತ್ತಿದ್ದಾರೆ. ಅದೇ ರೀತಿ ಗುಣಮುಖ ಆಗಬಹುದಾದ ಕಾಯಿಲೆಗಳಿಂದ ದೇಶದಲ್ಲಿ ವಾರ್ಷಿಕ 24 ಲಕ್ಷ ಜನ ಸಾಯುತ್ತಿದ್ದಾರೆ. ಇದು ದೇಶದ ಆರೋಗ್ಯ ವ್ಯವಸ್ಥೆಯ ದುಸ್ಥಿತಿ. ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕೀಯ ವ್ಯವಸ್ಥೆಗಾಗಿ ಕೆಆರ್ ಎಸ್ ಪಕ್ಷವನ್ನು ಬೆಂಬಲಿಸಿ ಎಂದು ಅಭ್ಯರ್ಥಿ ಡಾ.ಸುನೀಲಕುಮಾರ್ ಹಬ್ಬಿ ಹೇಳಿದರು.
ರಾಜ್ಯ ಜಂಟಿಕಾರ್ಯದರ್ಶಿ ಕೆ.ಎಸ್ ಸೋಮಸುಂದರ್, ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ್, ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಮಯೂರಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.