ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಸಿಂದಗಿ ವಿಧಾನಸಭಾ ಉಪ ಚುನಾವಣೆ ಸಂಬಂಧ ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸಿದರು. ಮಾಜಿ ಸಚಿವ, ಶಾಸಕ ಎಂ.ಬಿ ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದು, ಮಾರ್ಚ್ 19ರಂದು ಬೃಹತ್ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ಸುಮಾರು 40-50 ಸಾವಿರ ಜನಸಂಖ್ಯೆ ಸೇರಿಸುವ ಚರ್ಚೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ಚುನಾವಣೆ ತಯಾರಿ ಶುರು ಮಾಡಿದೆ.
ಇನ್ನು ಟಿಕೆಟ್ ಆಕಾಂಕ್ಷಿಗಳ ಲಿಸ್ಟ್ ನಲ್ಲಿ ಶರಣಪ್ಪ ಸುಣಗಾರ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ವಿಠ್ಠಲ ಕೊಳೂರ ಹೆಸರುಗಳು ಕೇಳಿ ಬಂದಿದ್ದು, ತೀವ್ರ ಪೈಪೋಟಿ ಇರುವುದು ಸುಣಗಾರ ಹಾಗೂ ಮನಗೂಳಿ ನಡುವೆ ಅನ್ನೋದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಜೊತೆ ಚರ್ಚಿಸಿದ ಬಳಿಕ ಜಿಲ್ಲಾ ಮಟ್ಟದ ನಾಯಕರು ಸಭೆ ನಡೆಸಿ, ಮಾರ್ಚ್ 19ಕ್ಕೆ ಬೃಹತ್ ಸಮಾರಂಭ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವೇಳೆ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ಆಲಗೂರ, ಶಾಸಕ ಶಿವಾನಂದ ಪಾಟೀಲ, ಶರಣಪ್ಪ ಸುಣಗಾರ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ವಿಠ್ಠಲ ಕೊಳೂರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.