ಪ್ರಜಾಸ್ತ್ರ ಬ್ರೇಕಿಂಗ್
ಸಿಂದಗಿ: ಕರೋನಾ ಲಾಕ್ ಡೌನ್ ನಿಂದ ಮುಂದೂಡಲಾಗಿದ್ದ ಎಸ್ಎಸ್ಎಲ್ ಸಿ ಪರೀಕ್ಷೆ ಇಂದಿನಿಂದ ಶುರುವಾಗಿವೆ. ಮಹಾಮಾರಿ ಕರೋನಾದಿಂದಾಗಿ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಆದ್ರೆ, ಪಟ್ಟಣದಲ್ಲಿ ಪರೀಕ್ಷೆ ನಡೆಯುತ್ತಿರುವ ರೀತಿ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್.ಜಿ ಕಾಲೇಜು ಸಹ ಒಂದು. ಇಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ಕೇಂದ್ರದ ಸುತ್ತ ನಿನ್ನೆ ರಾತ್ರಿ ಬಿಳಿ ಗೆರೆ ಹಾಕುವ ಮೂಲಕ ಮಾರ್ಕ್ ಮಾಡಲಾಗಿತ್ತು. ಇದೀಗ ಪೊಲೀಸ್ ವ್ಯಾನ್ ವೊಂದು ನಿಂತಿದೆ. ಆದ್ರೆ, ಇದೆಲ್ಲವೂ ಹೆಸರಿಗೆ ಮಾತ್ರ. ಸರ್ಕಾರದ ಮಾರ್ಗಸೂಚಿಗಳು ಗಾಳಿಗೆ ತೂರಿಕೊಂಡು ಹೋಗಿವೆ.
ಪರೀಕ್ಷಾ ಕೇಂದ್ರದ ಕಾಂಪೌಂಡ್ ಸುತ್ತ ನೂರಾರು ಜನ ಗುಂಪು ಗುಂಪಾಗಿ ನಿಂತುಕೊಂಡಿದ್ದಾರೆ. ಬೈಕ್ ಗಳನ್ನ ಅಲ್ಲಿಯೇ ಪಾರ್ಕ್ ಮಾಡಿದ್ದಾರೆ. ಇದರ ಜೊತೆಗೆ ಕರೋನಾದಿಂದ ಪಟ್ಟಣದ ತರಕಾರಿ ಮಾರುಕಟ್ಟೆಯನ್ನ ಕೆಲವು ಕಡೆ ವಿಂಗಡಿಸಲಾಗಿದೆ. ಅದರಲ್ಲಿ ಹೆಚ್.ಜಿ ಕಾಲೇಜು ಮುಂದಿನ ರಸ್ತೆಯೂ ಒಂದು. ಪರೀಕ್ಷೆ ದಿನವೂ ಸಹ ಹಣ್ಣು, ತರಕಾರಿ ವ್ಯಾಪಾರ ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಕಾಂಪೌಂಡ್ ಸುತ್ತ ಮುತ್ತ ಹೀಗೆ ಬೇಕಾಬಿಟ್ಟಿಯಾಗಿ ಸಾರ್ವಜನಿಕರನ್ನ ಬಿಟ್ಟಿರುವ ತಾಲೂಕು ಶಿಕ್ಷಣ ಇಲಾಖೆ ಏನು ಮಾಡ್ತಿದೆ ಅನ್ನೋ ಪ್ರಶ್ನೆ ಮೂಡಿದೆ.
ವೈದ್ಯಕೀಯ ಶಿಕ್ಷಣ ಸಚಿವರು ಯಾವುದೇ ಒಬ್ಬ ವಿದ್ಯಾರ್ಥಿಗೂ ಸೋಂಕು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದ್ದಾರೆ. ಅದರಲ್ಲಿ ಬೇರೆ ಜಿಲ್ಲೆಯಲ್ಲಿ ಓರ್ವ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಇಷ್ಟೆಲ್ಲ ಗೊತ್ತಿದ್ರೂ ಸಿಂದಗಿ ಪಟ್ಟಣದ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ನಿಯಮಗಳನ್ನ ಗಾಳಿಗೆ ತೂರಿರುವುದು ಕಂಡು ಬರ್ತಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.