ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ಸಂಜಯನಗರ ಬಸ್ ನಿಲ್ದಾಣದ ಪಕ್ಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ತಲೆಗೆ ಗುಂಡೇಟು ಬಿದ್ದಿದೆ. ಪಿಸ್ತೂಲ್ 3.2ನಿಂದ ಗುಂಡು ಹಾರಿಸಲಾಗಿದ್ದು, ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾ? ಯಾರಾದರೂ ಗುಂಡು ಹಾರಿಸಿದ್ದಾ ಅನ್ನೋದು ತಿಳಿದು ಬಂದಿಲ್ಲ. ಹೀಗಾಗಿ ಈ ಸಾವಿನ ಹಲವು ಪ್ರಶ್ನೆಗಳು ಮೂಡಿವೆ.
ರಾಹುಲ್ ಭಂಡಾರಿ ಅನ್ನೋ ವಿದ್ಯಾರ್ಥಿ ಸಾವನ್ನಪ್ಪಿದ್ದು, ಆತನ ಜೇಬಿನಲ್ಲಿ ಮೊಬೈಲ್ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ವಿದ್ಯಾರ್ಥಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 3-4 ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಕೆಲವೊಮ್ಮೆ ವಾಕ್ ಹೋಗುತ್ತಿದ್ದ. ಪೋಷಕರು ಬೆಳಗ್ಗೆ ರೂಮಿನಲ್ಲಿ ನೋಡಿದಾಗ ರಾಹುಲ್ ಇರಲಿಲ್ಲ. ಫೋನ್ ಮಾಡಿದರೆ ಫೋನ್ ಸ್ವೀಕರಿಸಿಲ್ಲ. ಪೊಲೀಸರು ಪೋಷಕರಿಗೆ ವಿಷಯ ತಿಳಿಸಿದ ಮೇಲೆ ಗೊತ್ತಾಗಿದೆ.
ರಾಹುಲ್ ತಂದೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, 2017ರಲ್ಲಿ ನಿವೃತ್ತಿ ಹೊಂದಿದಾಗ ಪಿಸ್ತೂಲ್ ಪರವಾನಿಗೆ ಪಡೆದುಕೊಂಡಿದ್ದರು. ಅದು ಮನೆಯ ಅಲ್ಮೇರಾದಲ್ಲಿ ಇದ್ದಿತ್ತು. ಪಿಸ್ತೂಲ್ ಬಳಕೆ ಬಗ್ಗೆ ರಾಹುಲಗೂ ಗೊತ್ತಿತಂತೆ. ಈ ಬಗ್ಗೆ ಡಿಸಿಪಿ ಅನುಚಿತ್ ಮಾತನಾಡಿದ್ದು, ಸದಾಶಿವನಗರ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಯುವಕನ ಶವ ಪತ್ತೆಯಾಗಿದೆ. ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಪ್ರಾಥಮಿಕ ಹಂತದಿಂದ ತಿಳಿದು ಬಂದಿದೆ ಎಂದಿದ್ದಾರೆ.