ಮುರುಡೇಶ್ವರ: ಯುವತಿಯೊಂದಿಗೆ ಪಾರಾರಿಯಾಗಿದ್ದ ಸ್ವಾಮೀಜಿ ಮುರುಡೇಶ್ವರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳೆದೊಂದು ವಾರದಿಂದ ಅಲ್ಲಿಂದ ಇಲ್ಲಿ. ಇಲ್ಲಿಂದ ಅಲ್ಲಿಯೆಂದು ಊರೂರು ಅಲೆಯುತ್ತಿದ್ದ ಐನಾತಿ ಸ್ವಾಮೀಜಿಯನ್ನ ಪೊಲೀಸ್ರು ಕಡೆಗೂ ಪತ್ತೆ ಹಚ್ಚಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಪಡಿಸುವುದಾಗಿ ಗ್ರಾಮಕ್ಕೆ ಬಂದಿದ್ದಾನೆ. ಬಳಿಕ ಶಿವರಾತ್ರಿ ನಿಮಿತ್ತ ಅದ್ಧೂರಿ ಜಾತ್ರೆಯನ್ನ ಸಹ ನಡೆಸಿದ್ದಾನೆ. ಮುಂದೆ ಫೆಬ್ರವರಿ 27 ರಂದು 19 ವರ್ಷದ ಯುವತಿಯೊಂದಿಗೆ ಗ್ರಾಮಸ್ಥರು ದೇವಸ್ಥಾನದ ಅಭಿವೃದ್ಧಿಗೆ ನೀಡಿದ್ದ ಲಕ್ಷಾಂತರ ರೂಪಾಯಿಯೊಂದಿಗೆ ಎಸ್ಕೇಪ್ ಆಗಿದ್ದ. ಯುವತಿ ನಾಪತ್ತೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೇಸ್ ದಾಖಲಿಸಿದ್ರು.
ಹೀಗೆ ಓಡಿ ಹೋದ ಕಳ್ಳ ಸ್ವಾಮೀಜಿ, ಯುವತಿಯನ್ನ ತಿರುಪತಿಯಲ್ಲಿ ಮದುವೆಯಾಗಿರುವುದಾಗಿ ಹುಡ್ಗಿಯ ಸಹೋದರನಿಗೆ ಫೋನ್ ಮಾಡಿ ತಿಳಿಸಿದ್ದ. ಅಲ್ಲಿಂದ ವಿಜಯಪುರ, ಮುದ್ದೇಬಿಹಾಳ, ಹಾವೇರಿ ಅಂತಾ ಊರೂರು ಸುತ್ತಾಡಿದ್ದಾನೆ. ಇಂದು ಮುರುಡೇಶ್ವರದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತನ ಮೂಲ ಹೆಸರು ರಾಘವೇಂದ್ರವಾಗಿದ್ದು, ಈಗಾಗ್ಲೇ ಎರಡು ಮದ್ವೆಯಾಗಿದ್ದಾನಂತೆ. ಅಲ್ದೇ, ರಾಜ್ಯದ ಹಲವು ಕಡೆ ಈತನ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿವೆ.