ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಇದೀಗ ತೀವ್ರ ಚರ್ಚೆಯಲ್ಲಿರುವುದು ಹುಲಿ ಉಗುರಿನ ಲಾಕೆಟ್ ಧರಿಸಿರುವುದು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ದಿಢೀರ್ ಬಂಧನದ ಬಳಿಕ, ಹಲವು ಕ್ಷೇತ್ರಗಳ ಖ್ಯಾತನಾಮರ ಫೋಟೋ, ವಿಡಿಯೋ ವರೈಲ್ ಆದವು. ದಿನ ಕಳೆದೊಂದು ಒಬ್ಬೊಬ್ಬರ ಫೋಟೋ ವೈರಲ್ ಆಗುತ್ತಿವೆ.
ನೋಟಿಸ್ ಕೊಡದೆ, ಸ್ಪಷ್ಟನೆ ಕೇಳದೆ ವರ್ತೂರು ಸಂತೋಷ್ ಬಂಧನ, ಬಾಳೆಹೊನ್ನೂರಿನಲ್ಲಿ ಇಬ್ಬರು ಪೂಜಾರಿಗಳ ಬಂಧನ ನಡೆದಿದೆ. ಆದರೆ, ಇದೆ ಕಾನೂನು ಪಾಲನೆಯನ್ನು ನಟರಾದ ದರ್ಶನ್, ಜಗ್ಗೇಶ್, ನಿಖಿಲ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಿನಯ್ ಗೂರಾಜಿ, ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ, ವಿಜಯಪುರದ ಬಿಜೆಪಿ ನಾಯಕ ವಿಜುಗೌಡ ಪಾಟೀಲ ಪುತ್ರ ಹೀಗೆ ಹಲವು ಖ್ಯಾತನಾಮರ, ಅವರ ಮಕ್ಕಳ, ಸಂಬಂಧಿಕರು ಹುಲಿ ಉಗುರಿನ ಪೆಂಡೆಂಟ್ ಇರುವ ಲಾಕೆಟ್ ಧರಿಸಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಇಷ್ಟೊಂದು ತೀವ್ರವಾಗಿ ಚರ್ಚೆಯಾಗುತ್ತಿರುವ ಈ ಪ್ರಕರಣ ಶೀಘ್ರದಲ್ಲೇ ತಣ್ಣಗಾಗಲಿದೆ. ಯಾವ ನಟರು, ರಾಜಕಾರಣಿಗಳು, ಅವರ ಮಕ್ಕಳು, ಸ್ವಾಮೀಜಿಗಳ ಬಂಧನವಾಗಲ್ಲ. ಪೊಲೀಸ್ ವಿಚಾರಣೆ ನಡೆಯಲ್ಲ. ಯಾಕಂದರೆ ಯಾವಾಗ ಹೈಪ್ರೊಫೈಲ್ ಜನರ ಹೆಸರುಗಳು ಬಹಿರಂಗವಾಗುತ್ತವೋ ಆಗ ಮಧ್ಯಮದಲ್ಲಿ ಅಬ್ಬರಿಸಿ ಸೈಡ್ ಲೈನ್ ಆಗುತ್ತವೆ ಹೊರತು ಯಾವ ಕಾನೂನು ಕ್ರಮವಾಗುವುದಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಕಳೆದ 2020ರಲ್ಲಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಬಳಕೆ, ಕಳ್ಳಸಾಗಾಟ ವಿಚಾರ ಸಂಬಂಧ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಬಂಧನವಾಯಿತು. ಇದರಲ್ಲಿ ಚಿತ್ರರಂಗದ, ರಾಜಕೀಯ ಕ್ಷೇತ್ರದ ಅನೇಕ ಖ್ಯಾತನಾಮರು ಶಾಮೀಲಾಗಿದ್ದಾರೆ ಅನ್ನೋ ಸುದ್ದಿ ಹರಡುತ್ತಲೇ ತಣ್ಣಗಾಯಿತು. ನಟಿಯರಾದ ರಾಗಿಣಿ, ಸಂಜನಾ ಇಬ್ಬರ ಕರಿಯರ್ ಹಾಳಾಯಿತು, ಸಮಾಜದಲ್ಲಿ ಒಂದಿಷ್ಟು ಕೆಟ್ಟ ಹೆಸರು ಬಂತು. ಉಳಿದವರ ಯಾರೊಬ್ಬರ ಹೆಸರು ಹೊರಗೆ ಬರಲಿಲ್ಲ.
ಹುಲಿ ಉಗುರಿನ ವಿಚಾರದಲ್ಲಿ ಇದೆ ಘಟನೆ ಮರುಕಳಿಸುವ ಎಲ್ಲ ಲಕ್ಷಣಗಳಿವೆ. ಪ್ರಧಾನಿ, ಮುಖ್ಯಮಂತ್ರಿಗಳು ಜೈಲಿಗೆ ಹೋಗಿ, ಶಿಕ್ಷೆ ಅನುಭವಿಸಿ ಬಂದ ಈ ದೇಶದಲ್ಲಿ ಇತ್ತೀಚನ ದಿನಗಳಲ್ಲಿ ಕಾನೂನು ಉಳ್ಳವರ ಕಾಲ್ಚಂಡಾಗುತ್ತಿದೆ ಅನ್ನೋ ಅಸಮಾಧಾನ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಈ ಘಟನೆ ಮತ್ತಷ್ಟು ಪುಷ್ಠಿ ನೀಡುತ್ತಾ ಕಾದು ನೋಡಬೇಕು.