ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ರಾಜ್ಯದಲ್ಲಿ ಹುಲಿ ಉಗುರಿನ ಚರ್ಚೆ ಜೋರಾಗಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸೇರಿ ಅನೇಕರ ಫೋಟೋ, ವಿಡಿಯೋ ವೈರಲ್ ಆಗುತ್ತಿವೆ.
ಇನ್ನು ವಿನಯ ಗುರೂಜಿ ಹುಲಿಯ ಚರ್ಮದ ಮೇಲೆ ಕುಳಿತಿರುವ ಫೋಟೋ ಸಹ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಮಗನೆಂದು ಹೇಳುತ್ತಿರುವ ಯುವಕನ ಫೋಟೋ ಸಹ ಹರಿದಾಡುತ್ತಿದೆ. ಇಂತವರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಲಾಗುತ್ತಿದೆ.
ಇದಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಾನೂನು ಎಲ್ಲರಿಗೂ ಒಂದೇ. ವನ್ಯಜೀವಿ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದಿದ್ದಾರೆ. ಪರೋಕ್ಷವಾಗಿ ಆಗಲಿ, ಪ್ರತ್ಯಕ್ಷವಾಗಿ ಆಗಲಿ ವನ್ಯಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದೆ ಹೋದರೆ ಕಾನೂನು ಉಲ್ಲಂಘನೆಯಾಗುತ್ತದೆ. ನಾನು ಇಲ್ಲಿ ವೈಯಕ್ತಿಕವಾಗಿ ಯಾರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತೆ ಅಂತಾ ಹೇಳಿದ್ದಾರೆ.
ತಾವು ಧರಿಸುವ ಲಾಕೆಟ್ ನಲ್ಲಿ ಇರುವುದು ನಿಜವಾದ ಹುಲಿಯ ಉಗುರು ಎಂದಿರುವ ನಟ, ರಾಜಕಾರಣಿ ಜಗ್ಗೇಶಗೆ ಸಂಕಷ್ಟ ಎದುರಾಗಲಿದೆ. ದರ್ಶನ್ ಸೇರಿ ಅನೇಕರಿಗೆ ನೋಟಿಸ್ ಕಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಾರೆ ಕಾದು ನೋಡಬೇಕಿದೆ.