ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ: ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಪ್ರಸಿದ್ಧ ರಾವುತರಾಯ ಮಲ್ಲಯ್ಯನ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಆದರೆ, ಈ ಬಾರಿ ಬಂಡಿ ಉತ್ಸವ ಸರಾಗವಾಗಿ ಸಾಗಲಿಲ್ಲ. ಮೂರು ಬಾರಿ ಬಂಡಿಯ ಅಚ್ಚು ಕಟ್ಟಾಗಿದೆ. ಹೀಗಾಗಿ ರಾವುತರಾಯ ಮುನಿಸಿಕೊಂಡನಾ ಅನ್ನೋ ಪ್ರಶ್ನೆ ಭಕ್ತರಲ್ಲಿ ಮೂಡಿದೆ.
ಗುರುವಾರ ನಸುಕಿನಲ್ಲಿ ಅಲಂಕೃತಗೊಂಡ ತೆರೆದ ಬಂಡಿಯಲ್ಲಿ ರಾವುತರಾಯನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಛತ್ರಿ ಚಾಮರಗಳೊಂದಿಗೆ ಅಶ್ವಾರೂಢನಾಗಿ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮನೆದೊಡ್ಡಿ ಸ್ಥಳಕ್ಕೆ ಹೋಗಬೇಕಾದ ವೇಳೆ, ಮಾರ್ಕೆಟ್, ತಾಳಿಕೋಟಿ ರಸ್ತೆ ಹಾಗೂ ಮೊಹರೆ ವೃತ್ತದಲ್ಲಿ ಬಂಡಿಯ ಅಚ್ಚು ಕಟ್ಟಾಗಿದೆ. ಇದು ಸಹಸ್ರಾರು ಭಕ್ತರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಸಾಯಂಕಾಲವಾದರೂ ಬಂಡಿ ದೇವಸ್ಥಾನಕ್ಕೆ ಹೋಗದೆ ಇರುವುದು ಆತಂಕಕ್ಕೆ ಕಾರಣವಾಗಿತ್ತು. ಗುಡಿ ತಲುಪಿದ ಬಳಿಕ ಶಿಡಿಗಟ್ಟೆಯ ಸ್ಥಳದಲ್ಲಿ ಭಕ್ತರ ಏಳು ಕೋಟಿ ಜಯಘೋಷದೊಂದಿಗೆ ಪೂಜಾರಿಗಳು ಶಸ್ತ್ರ ಹಾಕಿಕೊಳ್ಳುವ ಮೂಲಕ ಹೇಳಿಕೆ ನಡೆಯುತ್ತದೆ. ನಂತರ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದು ಬನ್ನಿ ಮುಡಿಲಾಗುತ್ತೆ. ಮೊದಲೇ ರಾಜ್ಯದಲ್ಲಿ ಬರಗಾಲ ಬಿದ್ದಿದ್ದು, ಬಂಡಿಯ ಅಚ್ಚು ಮೂರು ಬಾರಿ ಕಟ್ಟಾಗಿರುವುದಕ್ಕೆ ಭಕ್ತರು ಆತಂಕಗೊಂಡಿದ್ದಾರೆ.