ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಹತ್ತಿರ ಟೋಲ್ ಗೇಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದನ್ನ ವಿರೋಧಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯ್ತು.
ಸಂಗಮ ಸಂಸ್ಥೆ, ಮಹಿಳಾ ಸ್ಪೂರ್ತಿ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಟೋಲ್ ಗೇಟ್ ವಿರೋಧಿಸಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತ್ನಾಡಿದ ಬಿಎಸ್ಪಿ ರಾಜ್ಯ ಮುಖಂಡ ಡಾ.ದಸ್ತಗಿರಿ ಮುಲ್ಲಾ, ಕೇಂದ್ರ ಸರ್ಕಾರದ ಟೋಲ್ ಗೇಟ್ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಬಡವರ, ಹಿಂದುಳಿದವರ, ದಲಿತರ, ಅಲ್ಪಸಂಖ್ಯಾತರ ವಿರೋಧಿಯಾದ ಕೇಂದ್ರ ಸರ್ಕಾರ, ಕೂಡಲೇ ಟೋಲ್ ಗೇಟ್ ಕಾರ್ಯವನ್ನ ಕೈಬಿಡಬೇಕೆಂದು ಆಗ್ರಹಿಸಿದ್ರು.
ಡಿಎಸ್ಎಸ್ ಸಂಚಾಲಕ ವೈ.ಸಿ ಮಯೂರ ಮಾತ್ನಾಡಿ, ಪ್ರತಿಭಟನೆಯನ್ನ ಒಂದು ದಿನ ಮಾಡಿ ಬಿಡುವುದಿಲ್ಲ. ಇಂದಿನಿಂದ 7 ದಿನಗಳಲ್ಲಿ ತಮ್ಮ ಬೇಡಿಕೆ ಈಡೇರದಿದ್ರೆ, ಉಗ್ರ ಹೋರಾಟ ಮಾಡಲಾಗುವುದು ಅಂತಾ ಎಚ್ಚರಿಕೆ ನೀಡಿದ್ರು. ಅವರ ಪ್ರತಿಭಟನೆ ಮಾಡ್ತಾರೆ. ನಾವು ನಮ್ಮ ಕೆಲಸ ಮಾಡ್ತೀನಿ ಎಂದುಕೊಂಡ್ರೆ ನಡೆಯದು. ಜಿಲ್ಲಾಧಿಕಾರಿ, ಪ್ರಧಾನ ಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಟೋಲ್ ಗೇಟ್ ನಿರ್ಮಾಣ ಕಾರ್ಯವನ್ನ ಕೈಬಿಡಬೇಕೆಂದು ಒತ್ತಾಯಿಸಿದ್ರು.
ಪ್ರತಿಭಟನೆ ಬಳಿಕ ಸಿರಸ್ತದಾರ್ ಸುರೇಶ ಮ್ಯಾಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು. ಈ ವೇಳೆ ಸಂಗಮ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜು ಮಾದರ, ಟಿಪ್ಪು ಕ್ರಾಂತಿ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಅಬ್ದುಲ ರಜಕಾ ನಾಟೀಕಾರ, ಮಹಿಳಾ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ರು.