ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ವ್ಹೀಲ್ ಚೇರ್ ಇಲ್ಲದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಗಳನ್ನ ತಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಸಿರಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರ ಮಗಳು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಮಗಳನ್ನ ಬುಧವಾರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ವೈದ್ಯರು ಆಸ್ಪತ್ರೆಯ ಮತ್ತೊಂದು ವಿಭಾಗಕ್ಕೆ ಹೋಗಲು ಸೂಚಿಸಿದ್ದಾರೆ. ತಂದೆ ಮಾಬಾಷಾ, ಮಗಳಿಗೆ ಅಗತ್ಯ ಚಿಕಿತ್ಸೆ ಬೇಕಿದೆ. ವ್ಹೀಲ್ ಚೇರ್ ನೀಡಿಯೆಂದು ಸಿಬ್ಬಂದಿಯನ್ನ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ನಮ್ಮ ವಿಭಾಗದ ವ್ಹೀಲ್ ಚೇರ್ ಬೇಕಾದ್ರೆ ಅಲ್ಲಿಂದ ತಂದು ಇಲ್ಲಿ ತೆಗೆದುಕೊಂಡು ಹೋಗಿ ಅಂತಾ ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ. ಇದ್ರಿಂದ ರೋಸಹೋದ ತಂದೆ ಮಗಳನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.
ಮಗಳನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ತುಂಬಾ ತಿರುಗಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸ್ಥಿತಿ ಎಷ್ಟೊಂದು ಕೆಟ್ಟದಾಗಿರುತ್ತೆ ಅನ್ನೋದಕ್ಕೆ ಇಂಥಾ ಪ್ರಕರಣಗಳು ಆಗಾಗ ಸಾಕ್ಷಿಯಾಗುತ್ತಲೇ ಇರ್ತವೆ. ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಇಂತಹದೊಂದು ಘಟನೆ ನಡೆದಿದೆ. ಈ ಬಗ್ಗೆ ಸಚಿವರು ಏನು ಕ್ರಮ ತೆಗೆದುಕೊಳ್ತಾರೋ ಗೊತ್ತಿಲ್ಲ.