ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಹಾಗೂ ಕೋವಿಡ್ ನಿರ್ಮೂಲನೆ ಜಾಗೃತಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಭೆ ನಡೆಸಲಾಯ್ತು. ವಿಧಾನ ಪರಿಷತ್ ಸದಸ್ಯ ಅರುಣ ಶಾಹಾಪೂರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯ್ತು.
ಸಿಂದಗಿ ಪಟ್ಟಣದ ಕೆರೆಗೆ ಕಾಲುವೆಯಿಂದ ಪೂರೈಕೆಯಾಗುವ ನೀರು ಗುರುವಾರ ರಾತ್ರಿ 10ರಿಂದ ಬರಲಿದೆ. ಕುಡಿಯುವ ನೀರಿಗಾಗಿ ಕಾಲುವೆಗೆ ಹರಿಸಿರುವ ನೀರಿನಿಂದ 8 ದಿನಗಳಲ್ಲಿ ಕೆರೆ ತುಂಬಿಕೊಳ್ಳುವ ತಯಾರಿಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.
ಪಟ್ಟಣಕ್ಕೆ ಸಮರ್ಪಕವಾಗಿ ನೀರು ಪೊರೈಕೆಯಾಗಬೇಕು ಹಾಗೂ ಪೋಲಾಗಿ ಹರಿಯುವ ನೀರಿನ ಪೈಪು ದುರಸ್ತಿಗೊಳಿಸಲು ಸೂಚಿಸಲಾಯಿತು. ಬಳಗಾನೂರ ಕೆರೆಯಿಂದ ಪೂರೈಕೆಯಾಗಬೇಕಾದ ನೀರು ಆಗಸ್ಟ್ 15 ರಂದು ಹರಿಸುವುದಾಗಿ ಕೆಯುಡಬ್ಲುಎಸ್ ಎಇಇ ತಿಳಿಸಿದರು.
90 ಕೋಟಿ ರೂಪಾಯಿ ವೆಚ್ಚದ ಒಳಚರಂಡಿಯ ಗುಣಮಟ್ಟದ ಬಗ್ಗೆ ಚರ್ಚಿಸಲಾಯಿತು. ಸಿಂದಗಿಗೆ ಶಾಶ್ವತ ಕುಡಿಯುವ ನೀರಿಗಾಗಿ ನಡೆದಿರುವ ಬಳಗಾನೂರ ಕೆರೆಯ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಲಾಯ್ತು. ಆಲಮೇಲ ಭಾಗದ ಹಳ್ಳಿಗಳಾದ ದೇವಣಗಾಂವ, ಬಳಗಾನೂರ, ಚಾಂದಕವಟೆ, ಮೊರಟಗಿಗೆ ಪೊಲೀಸ್ ಬೀಟ್ ಹೆಚ್ಚಿಸಲು ಸೂಚಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಇಒ ಹೊಂಗಯ್ಯ, ಕೆಯುಡಬ್ಲುಎಸ್ ಎಇಇ ಪಟ್ಣಶೆಟ್ಟಿ, ಮೈನರ್ ಇರಿಗೇಷನ್ ಎಇಇ ಬಸವರಾಜ ಬಿರಾದಾರ, ಸಿಪಿಐ ಹೆಚ್.ಎಂ ಪಟೇಲ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಉಪಸ್ಥಿತರಿದ್ದು.