ಪ್ರಜಾಸ್ತ್ರ ಸುದ್ದಿ
ಸಿಂದಗಿ: ಹಾನಗಲ್ ಕುಮಾರಸ್ವಾಮಿ ಅವರ ಜೀವನಾಧಾರಿತ ‘ವಿರಾಟಪುರ ವಿರಾಗಿ’ ಚಿತ್ರದ ಪ್ರಚಾರದ ಕುಮಾರೇಶ್ವರ ರಥವನ್ನು ಪಟ್ಟಣದಲ್ಲಿ ತಾಲೂಕಿನ ವಿವಿಧ ಮಠಾಧೀಶರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಹಾಗೂ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.
ಸಾತವೀರೇಶ್ವರ ಸಭಾಭವನದಿಂದ ಸಾರಂಗಮಠದವರೆಗೂ ವಿವಿಧ ಕಲಾತಂಡಗಳೊಂದಿಗೆ ರಥಯಾತ್ರೆ ಸಾಗಿ ಬಂತು. ನಂತರ ಮಠದಲ್ಲಿ ಚಿತ್ರದ ಟ್ರೇಲರ್ ಪ್ರದರ್ಶನ ಮಾಡಲಾಯಿತು. ಈ ವೇಳೆ ಮಾತನಾಡಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಹಾನಗಲ್ ಕುಮಾರಸ್ವಾಮಿಗಳು ಆಧ್ಯಾತ್ಮಿಕ ಕ್ರಾಂತಿ ಮಾಡಿದವರು. ನಿರ್ದೇಶಕ ಬಿ.ಎಸ್.ಲಿಂಗದೇವರು ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಹಾನಗಲ್ ಶ್ರೀಗಳ ಗುರುಗಳಾದ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಪಾತ್ರವನ್ನು ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ನಿಭಾಯಿಸಿದ್ದಾರೆ ಎಂದರು.
ಚಿತ್ರದ ಕುರಿತು ವಿವಿಧ ಮಠಾಧೀಶರು, ಸಮಾಜದ ಮುಖಂಡರು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಯಂಕಂಚಿ, ಬೋರಗಿ, ಮಲಘಾಣ, ಕೊಕಟನೂರ, ಗೋಳಸಾರ, ಗದಗ, ಕಲಕೇರಿ, ಸಂಶಿಯ ಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಶಾಂತ ಪಟ್ಟಣಶೆಟ್ಟಿ, ಕಿರಣ ಕೋರಿ, ರವಿ ಗವಸಾನಿ, ಮುತ್ತು ಪಟ್ಟಣಶೆಟ್ಟಿ, ಕುಮಾರ ಕಿಣಗಿ ಅನೇಕರು ಉಪಸ್ಥಿತರಿದ್ದರು.
ಕುಮಾರೇಶ್ವರ ರಥದ ಉಸ್ತುವಾರಿ ಶಿವಾನಂದ ಬಿರಾಜದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಶಕುಂತಲಾ ಹಿರೇಮಠ ಪ್ರಾರ್ಥಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿದರು.