ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ರಹ್ಮದೇವನಮಡು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇದ್ರಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಾಕಷ್ಟು ಪರಿತಪಿಸ್ತಿದ್ದಾರೆ. ಕರೋನಾ ಭೀತಿಯಿಂದ ಹೊರ ಬರಲು ಆಗ್ತಿಲ್ಲ. ನೀರಿಗಾಗಿ ಹೊರ ಬಂದ್ರೆ ಗಂಟೆಗಟ್ಟಲೇ ಬಿಸಲಲ್ಲಿ ಕಾಯುತ್ತಾ ನಿಂತುಕೊಳ್ಳಬೇಕು. ಅದು ಊರಿನಿಂದ 1 ರಿಂದ ಒಂದೂವರೆ ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಬೋರ್ ವೆಲ್ ಮೂಲಕ ನೀರು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರು ಹಾಗೂ ಕೆರೆ ನೀರು ಇತ್ತು. ಕುಡಿಯುವ ನೀರಿನ ಪೂರೈಕೆಯನ್ನ ಕಳೆದೊಂದು ತಿಂಗಳಿನಿಂದ ನಿಲ್ಲಿಸಲಾಗಿದೆ. ಅಕ್ರಮವಾಗಿ ಸಂಪರ್ಕ ತೆಗೆದುಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದುವರೆಗೂ ಆಗಿಲ್ಲ.
ನಭಿರಸಲು, ಗ್ರಾಮಸ್ಥರು
ಇಲ್ಲಿ ನೀರಿಗೆ ಇಷ್ಟೊಂದು ಸಮಸ್ಯೆಯಾಗಲು ಕಾರಣ, ಅಕ್ರಮ ನೀರಿನ ಸಂಪರ್ಕವೆಂದು ಗ್ರಾಮಸ್ಥರು ಹೇಳ್ತಿದ್ದಾರೆ. ಹೊನ್ನಳ್ಳಿ ಕೆರೆಯಿಂದ ನೀರು ಸರಬರಾಜು ಮಾಡುವ ಮೇನ್ ಲೈನ್ ಗೆ ಕನೆಕ್ಷನ್ ಪಡೆದುಕೊಂಡು ಇಷ್ಟೊಂದು ಆಟವಾಡ್ತಿದ್ದಾರೆ. ಬಂದ್ ಮಾಡುವುದಾದ್ರೆ ನಮ್ಗೆ ಕೆರೆ ನೀರು ಬಂದ್ ಮಾಡಿ ಅಂತಿದ್ದಾರೆ ಎಂದು ಹೇಳ್ತಿದ್ದಾರೆ ಅಂತಾ ಇಲ್ಲಿನ ಯುವಕರು ಹೇಳ್ತಿದ್ದಾರೆ.
ಗುಮ್ಮಿಗೆ ಹೋಗುವ ಪೈಪ್ ಲೈನ್ ಒಡೆದು ಅನಧಿಕೃತವಾಗಿ ನಲ್ಲಿಯನ್ನ ಜೋಡಿಸಿ ನೀರು ಪಡೆಯಲಾಗ್ತಿದೆ. ಅಕ್ರಮ ನೀರು ಸಂಪರ್ಕ ತೆಗೆದುಕೊಂಡವರು ತಮ್ಮದು ಮುಗಿದ್ಮೇಲೆ ಬಂದ್ ಮಾಡುವುದಿಲ್ಲ. ಇದ್ರಿಂದಾಗಿ ಮುಂದೆ ನೀರು ಹೋಗ್ತಿಲ್ಲ. ಹೀಗಾಗಿ ಅಕ್ರಮ ಸಂಪರ್ಕ ಪಡೆದವರನ್ನ ತೆಗೆದುಹಾಕುವಂತೆ ಹೇಳಿದ್ದು, ಕಲಕೇರಿ ಠಾಣೆಯಲ್ಲಿ ಕಂಪ್ಲೇಟ್ ಕೊಟ್ಟಿದ್ದೇವೆ.
ಮಾನಪ್ಪ ವಾಲೀಕಾರ, ಅಧ್ಯಕ್ಷರು, ಹೊನ್ನಳ್ಳಿ ಗ್ರಾ.ಪಂ
ನೀರಿನಲ್ಲಿ ರಾಜಕೀಯ ಮಾಡಬಾರದು ಅಂತಾರೆ. ಆದ್ರೆ, ಬ್ರಹ್ಮದೇವನಮಡು ಗ್ರಾಮದಲ್ಲಿ ನೀರಿನ ರಾಜಕೀಯ ನಡೆದಿದೆ. ಗ್ರಾಮ ಪಂಚಾಯ್ತಿ ಸದಸ್ಯರ ನಡುವಿನ ಮುಸುಕಿನ ಗುದ್ದಾಟಕ್ಕೆ ನೀರಿನ ಸರಬರಾಜು ಮಾಡುವ ಕಾರ್ಯ ಮಾಡದೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ದೇ, ಗ್ರಾಮಸ್ಥರು ಪ್ರತಿಭಟನೆ ಸಹ ಮಾಡಿದ್ದಾರೆ.
ವಾರದ ಹಿಂದೆ ಮೋಟರ್ ಸುಟ್ಟಿದೆ. ಮತ್ತೊಂದು ತಂದು ಹಾಕಿದ್ದೇವೆ ಅದು ಸುಟ್ಟಿದೆ. ಇವತ್ತು ಸಂಜೆಯೊಳಗೆ ಎಲ್ಲವನ್ನೂ ಸರಿ ಮಾಡುತ್ತೇವೆ. ಆದ್ರೆ, ರಾತ್ರಿಯೊಳಗೆ ಪೈಪ್ ಒಡೆದು ಹಾಕಿರುತ್ತಾರೆ. ಯಾರು ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ ಸರ್. ಮೇನ್ ಲೈನ್ ಗೆ ಅಕ್ರಮವಾಗಿ 17 ಕನೆಕ್ಷನ್ ಇವೆ. ತೆಗೆದು ಹಾಕಿ ಎಂದು ನೋಟಿಸ್ ಕೊಟ್ಟಿದ್ದೇವೆ.
ಜೆ.ಕೆ ಅಲಸಂಗಿ, ಪಿಡಿಒ
ಒಟ್ಟಿನಲ್ಲಿ ಗ್ರಾಮದಲ್ಲಿ ನೀರಿನ ಗುದ್ದಾಟ ನಡೆದಿದೆ. ಅಕ್ರಮವಾಗಿ ನೀರಿನ ಸಂಪರ್ಕ ಪಡೆದುಕೊಂಡಿದ್ದು ಅಲ್ದೇ, ಬೇಕಾಬಿಟ್ಟಿಯಾಗಿ ನೀರನ್ನ ಪೋಲು ಮಾಡುವ ಮೂಲಕ ಬ್ರಹ್ಮದೇವನಡು ಗ್ರಾಮಸ್ಥರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಂತವರ ವಿರುದ್ಧ ಸೂಕ್ತ ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.