ನವದೆಹಲಿ: ಇಡೀ ದೇಶ ಒಗ್ಗಟ್ಟಿನಿಂದ ಕರೋನಾ ವಿರುದ್ಧ ಹೋರಾಡ್ತಿದೆ. ಇದರ ನಡುವೆ ಕೆಲವರು ತಮ್ಮ ನೀಚತನದಿಂದ ದೇಶಕ್ಕೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ. ಆದ್ರೆ, ಒಳ್ಳೆಯದು ಸಾಯಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಳಿವೆ. ಅದರಂತೆ ಈ ಯುವ ಗಾಲ್ಫರ್ ಸಹಾಯ ಇತರರಿಗೂ ಮಾದರಿ.
ಕರೋನಾ ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್ ಗೆ ಕ್ರೀಡಾ ಲೋಕದ ಅನೇಕ ದಿಗ್ಗಜರು ನೆರವು ನೀಡಿದ್ದಾರೆ. ಇದನ್ನ ನೋಡಿದ ಯುವ ಗಾಲ್ಫರ್ ಅರ್ಜುನ ಭಾಟಿ, ತಾನು ಒಂದಿಷ್ಟು ಸಹಾಯ ಮಾಡಬೇಕು ಅಂದುಕೊಂಡ. ಅದಕ್ಕೆ ಆತನ ಬಳಿ ಇದ್ದ 102 ಟ್ರೋಫಿಗಳನ್ನ ಮಾರಿ ಅದರಿಂದ ಬಂದ 4.30 ಲಕ್ಷ ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ನೀಡಿದ್ದಾನೆ.
ನಮ್ಮ ವೃತ್ತಿ ಬದುಕಿನಲ್ಲಿ ಬಂದ ಪ್ರಶಸ್ತಿ, ಬಹುಮಾನ, ಟ್ರೋಫಿಗಳು ಅನ್ನೋದು ಅತಿಮುಖ್ಯ. ನಮ್ಮ ಸತತ ಪ್ರಯತ್ನದ ಪ್ರತಿಫಲದ ಕಾಣಿಕೆ ಅದು. ಅದನ್ನ ಮಾರುವುದು ಅಷ್ಟೊಂದು ಸುಲಭದ ಮಾತಲ್ಲ. ಯಾಕಂದ್ರೆ, ಒಂದೊಂದು ಪ್ರಶಸ್ತಿ ಹಿಂದೆ ಹತ್ತಾರು ನೆನಪುಗಳು ಇರುತ್ತವೆ. ಹೀಗಿರುವಾಗ ಅವುಗಳನ್ನ ಮಾರಿದ ಅರ್ಜುನ ನಿಜಕ್ಕೂ ಗ್ರೇಟ್. ಟ್ರೋಫಿ ಮಾರಿ 4.30 ಲಕ್ಷ ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ನೀಡಿದ ಅರ್ಜುನ ಭಾಟಿ ಇತರರಿಗೂ ಮಾದರಿಯಾಗುವ ಆಟಗಾರ.
ತಾನು ನೀಡಿರುವ ದೇಣಿಗೆಯನ್ನ ಪಿಎಂಗೆ ಟ್ವೀಟ್ ಮೂಲಕ ತಿಳಿಸಿದ ಅರ್ಜುನ, ತನ್ನ ಅಜ್ಜಿ ಕಣ್ಣೀರು ಸುರಿಸಿ ಹೇಳಿದ ಮಾತುಗಳ ವಿಚಾರವನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಟ್ರೋಫಿ ಮತ್ತೆ ಬಂದೆ ಬರುತ್ತೆ ಎಂದು ಹರಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದು, ದೇಶದ ಜನರ ಈ ಭಾವನಾತ್ಮಕ ಕಾರ್ಯವೇ ಕರೋನಾವನ್ನ ಓಡಿಸುತ್ತೆ ಎಂದಿದ್ದಾರೆ.