ರಾಯಚೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ನಡೆದುಕೊಂಡು ಊರು ಸೇರಲು ಹೋಗಿ ಪ್ರಾಣ ಕಳೆದುಕೊಂಡ ಗಂಗಮ್ಮ ಕುಟುಂಬಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದಲ್ಲಿ ಬಂದ ಸುದ್ದಿ ವ್ಯಾಪಕ ಚರ್ಚೆಯಾಗ್ತಿದ್ದಂತೆ ಸಿಎಂ ನೆರವಿಗೆ ಬಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಸಿಂಧನೂರಿನ ಮಹಿಳೆ ಮಾರ್ಗಮಧ್ಯೆ ಅಸುನೀಗಿರುವುದು ದುರದೃಷ್ಟಕರ ಹಾಗೂ ನೋವಿನ ಸಂಗತಿ. ಈ ಬಗ್ಗೆ ಪರಿಶೀಲಿಸಿ ಮೃತ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ:
ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ ಗಂಗಮ್ಮ, ಲಾಕ್ ಡೌನ್ ಘೋಷಣೆಯಾದಾಗ ಕೆಲಸ ಕಳೆದುಕೊಂಡ್ರು. ಮುಂದೆ ತಮ್ಮ ಹುಟ್ಟೂರಿಗೆ ಬರಲು ಟ್ರ್ಯಾಕ್ಟರ್ ಹತ್ತಿ ಬಂದ್ರು. ಆದ್ರೆ, ಮಾರ್ಚ್ 30ರಂದು ತುಮಕೂರಿನಲ್ಲಿ ಟ್ರ್ಯಾಕ್ಟರ್ ತಡೆಯಲಾಯ್ತು. ಹೀಗಾಗಿ ಗಂಗಮ್ಮ ಸೇರಿದಂತೆ ಇತರರು ನಡೆದುಕೊಂಡು ಊರು ಸೇರಲು ಶುರು ಮಾಡಿದ್ರು.
ರಣರಣಬಿಸಿಲು, ಸರಿಯಾಗಿ ಊಟವಿಲ್ಲ. ಕುಡಿಯಲು ನೀರು ಸಹ ಇಲ್ಲ. ಹೀಗಾಗಿ ಸಾಕಷ್ಟು ಬಳಲಿಕೊಂಡೆ ಬಳ್ಳಾರಿಯವರೆಗೂ ಬಂದ್ರು. ಏಪ್ರಿಲ್ 2ರಂದು ಬಳ್ಳಾರಿಯಲ್ಲಿ ಪೊಲೀಸ್ರು ತಡೆದು ಪುರ್ನವಸತಿ ಕೇಂದ್ರಕ್ಕೆ ಸೇರಿಸಿದ್ರು. ಆದ್ರೆ, ಊಟ, ನೀರು ಇಲ್ಲದೆ ಅಸ್ವಸ್ಥಗೊಂಡಿದ್ದ ಗಂಗಮ್ಮಳ್ಳನ್ನ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ಚಿಕಿತ್ಸೆ ಫಲಿಸದೆ ಏಪ್ರಿಲ್ 5ರಂದು ಮೃತಪಟ್ಟರು. ಇದು ಮಾಧ್ಯಮದಲ್ಲಿ ಸುದ್ದಿಯಾಗಿ ಸಾಕಷ್ಟು ಚರ್ಚೆಯಾಯ್ತು. ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗ ಸಹ ನಡೆಯಿತು.
ಇದೀಗ ಸಿಎಂ ಟ್ವೀಟ್ ಮೂಲಕ ಪರಿಹಾರದ ಭರವಸೆ ನೀಡಿದ್ದಾರೆ. ಸಿಎಂ ಆದೇಶವನ್ನ ಅಧಿಕಾರಿಗಳು ಅದೆಷ್ಟು ಬೇಗ ಈಡೇರಿಸುತ್ತಾರೋ ಕಾದು ನೋಡ್ಬೇಕು.