ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ತಿಂಗಳಾಗುತ್ತಾ ಬರುತ್ತಿದೆ. ಆದರೂ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ವಿಧಾನಸಭೆಯ ಸದಸ್ಯರ ಬಲಾಬಲದಲ್ಲಿ ವಿರೋಧ ಪಕ್ಷದಲ್ಲಿ ಇದೀಗ ಬಿಜೆಪಿ ಇದೆ. ಈಗ ವಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಿದೆ. ಇದುವರೆಗೂ ಬಿಜೆಪಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರಣ ಎನ್ನಲಾಗುತ್ತಿದೆ.
ಈ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆಯಂತೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಹೆಚ್.ಕೆ ಪಾಟೀಲ, ರಾಮಲಿಂಗ ರೆಡ್ಡಿ, ಆರ್.ವಿ ದೇಶಪಾಂಡೆ, ಕೆ.ಜೆ ಜಾರ್ಜ್ ನಂತಹ ಘಟಾನುಘಟಿ ನಾಯಕರನ್ನು ಕಟ್ಟಿಹಾಕಲು ಸಾಮರ್ಥ್ಯವಿರುವ ವಿಪಕ್ಷ ನಾಯಕ ಬೇಕಿದೆ. ಬಿಜೆಪಿ ಘಟಾನುಘಟಿ ನಾಯಕರೆ ಸೋತು ಹೋಗಿರುವುದರಿಂದ ಯಾರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಅನ್ನೋ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪುತ್ರ, ಶಾಸಕ ಬಿ.ವೈ ವಿಜಯೇಂದ್ರನ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಸಿಎಂ ಬೊಮ್ಮಾಯಿ ಪರ ಬ್ಯಾಟ್ ಬೀಸುತ್ತಿದ್ದಾರಂತೆ. ಬೊಮ್ಮಾಯಿ ವಿಪಕ್ಷ ನಾಯಕನಾದರೆ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ತೊಂದರೆ ಆಗಲ್ಲ ಅನ್ನೋ ಲೆಕ್ಕಾಚಾರವಂತೆ.
ಇನ್ನೊಂದು ಕಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಅಶ್ವತ್ಥನಾರಾಯಣ ಪರ ಒಲವು ಹೊಂದಿದ್ದು, ಇವರಲ್ಲಿ ಒಬ್ಬರಿಗೆ ವಿಪಕ್ಷ ಸ್ಥಾನ, ಮತ್ತೊಬ್ಬರಿಗೆ ರಾಜ್ಯಾಧಕ್ಷ ಸ್ಥಾನ ಕೊಡಿಸಲು ಯತ್ನ ನಡೆಸಿದ್ದಾರಂತೆ. ಈ ಮೂಲಕ ತಮ್ಮ ಹಿಡಿತ ಸಾಧಿಸಲು ಹೊರಟಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು, ಕರ್ನಾಟಕದ ಜನತೆ ನೀಡಿರುವ ಹೊಡೆತಕ್ಕೆ ಬಿಜೆಪಿ ಹೈಕಮಾಂಡ್ ಥಂಡಾ ಆಗಿದ್ದು, ಏನು ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿಯೇ ಇನ್ನು ಮುಳುಗಿದೆ.