ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕದಿಂದ ಸೆರೆ ಹಿಡಿಯಲಾದ ಕಾಡಾನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡಿಗರ ತೆರಿಗೆ ರಾಹುಲ್ ಗಾಂಧಿ ಜೇಬಿಗೆ ಎಂದು ಬರೆದಿದ್ದಾರೆ. ಕನ್ನಡಿಗರ ತೆರಿಗೆ ಹಣವನ್ನ ಕೇರಳದ ಸಂಸದರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ ಅವರ ಅಣತಿಯಂತೆ ಬಿಡುಗಡೆ ಮಾಡಲು ಕರ್ನಾಟಕವೇನು ಕಾಂಗ್ರೆಸ್ ಪಕ್ಷದ ಆಸ್ತಿ ಅಂದುಕೊಂಡಿದ್ದೀರಾ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೆ ಇದು ನಮ್ಮ ತೆರಿಗೆ ನಮ್ಮ ಹಕ್ಕು ಅಂತ ನಿಮ್ಮ ಪಕ್ಷದ ಹೈಕಮಾಂಡ್ ನಾಯಕರ ಬಳಿ ಧೈರ್ಯವಾಗಿ ಪ್ರಶ್ನಿಸಲು ನಿಮ್ಮ ಸಚಿವರಿಗೆ ತಾಕತ್ತಿಲ್ಲವೇ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.