ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ವಿಪಕ್ಷ ನಾಯಕನ ಆಯ್ಕೆ. ಸೋಮವಾರದಿಂದ ಬಜೆಟ್ ಅಧಿವೇಶನ ಶುರುವಾಗಲಿದೆ. ಆದರೆ, ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಈಗ ಗೆದ್ದು ಬಂದಿರುವ ಬಿಜೆಪಿ ನಾಯಕರಲ್ಲಿ ಯಾರಿಗೂ ಆ ಅರ್ಹತೆ, ಸಾಮರ್ಥ್ಯ ಇಲ್ಲವೇ ಅನ್ನೋ ಪ್ರಶ್ನೆ ಮೂಡಿದೆ.
ಶಾಸಕರಾದ ಯತ್ನಾಳ, ಆರ್.ಅಶೋಕ್, ಮಾಜಿ ಸಿಎಂ ಬೊಮ್ಮಾಯಿ ಸೇರಿ ಅನೇಕರ ಹೆಸರು ಕೇಳಿ ಬರುತ್ತಿವೆ. ಆದರೂ ಈ ಬಗ್ಗೆ ಹೈಕಮಾಂಡ್ ತುಟಿ ಬಿಚ್ಚುತ್ತಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ಬೆಂಗಳೂರಿಗೆ ಬರಲಿದ್ದು, ವಿಪಕ್ಷ ನಾಯಕನ ಆಯ್ಕೆ ಆಗುತ್ತೆ ಎನ್ನಲಾಗಿತ್ತು. ಅದೂ ಆಗಿಲ್ಲ.
ಮಾಜಿ ಸಿಎಂ ಬಿಎಸ್ವೈ, ರಾಜ್ಯಾಧ್ಯಕ್ಷ ಕಟೀಲ್ ದೆಹಲಿಗೆ ಪ್ರಯಾಣ ಬೆಳಸುತ್ತಿದ್ದಾರೆ. ಅಲ್ಲಿಯೇ ಯಾರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು ಎಂದು ಅಂತಿಮವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎನ್ನಲಾಗುತ್ತಿದೆ. ಒಂದು ವೇಳೆ ಇಂದೂ ಬಗೆಹರಿಯದೆ ಹೋದರೆ, ವಿಪಕ್ಷ ನಾಯಕನಿಲ್ಲದೆ ನಾಳೆಯಿಂದ ಬಜೆಟ್ ನಡೆಯಲಿದೆ. ಇದು ರಾಜ್ಯ ರಾಜಕೀಯ ಇತಿಹಾಸದಲ್ಲಿ ವಿಚಿತ್ರ ದಾಖಲೆ ಎನ್ನಬಹುದು.