ಪ್ರಜಾಸ್ತ್ರ ಸುದ್ದಿ
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಇದೀಗ ರಾಜಕೀಯ ಸಮರ ಜೋರಾಗಿದೆ. ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆಯೂ ಇದೇ ವರ್ಷ ನಡೆಯುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದೆ. ಆದರೆ, ಇದೀಗ ಕೀಳು ಮಟ್ಟಕ್ಕೆ ಇಳಿದು ಪ್ರಚಾರ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಆಡಳಿತರೂಢ ಪಕ್ಷ ವೈಎಸ್ ಆರ್ ಸಿಪಿ ಹಾಗೂ ಟಿಡಿಪಿ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಕಾಂಡೋಮ್ ಪ್ಯಾಕೆಟ್ ಬಳಸಿಕೊಂಡಿವೆ ಎನ್ನುವ ವಿಡಿಯೋವೊಂದು ಹರಿದಾಡುತ್ತಿದೆ. ಟಿಡಿಪಿ ಪ್ರಚಾರಕ್ಕಾಗಿ ಕಾಂಡೋಮ್ ಗಳನ್ನು ಹಂಚಲು ಶುರು ಮಾಡಿದೆ. ಇದೆಂಥಾ ಹುಚ್ಚಾಟ? ವಯಾಗ್ರಾ ನೀಡಲಿದೆಯಾ? ಇಷ್ಟಕ್ಕೆ ನಿಲ್ಲಿಸಲಿದೆಯಾ, ಇನ್ನೂ ಕೆಳ ಮಟ್ಟಕ್ಕೆ ಇಳಿಯುತ್ತಾ ಎಂದು ವೈಎಸ್ ಆರ್ ಸಿಪಿ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಬರೆದು ವಾಗ್ದಾಳಿ ನಡೆಸಿದೆ.
ಹೀಗಿರುವ ಹೊತ್ತಿನಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಸಿದ್ಧಂ ಅಭಿಯಾನ ನಡೆಸುತ್ತಿದೆ. ಅದೇ ಹೆಸರು ಇರುವ, ಪಕ್ಷದ ಚಿಹ್ನೆಯಾದ ಫ್ಯಾನ್ ಚಿತ್ರದೊಂದಿಗೆ ವೈಎಸ್ ಆರ್ ಸಿಪಿ ಸಹ ಕಾಂಡೋಮ್ ಪ್ಯಾಕೆಟ್ ಮೂಲಕ ಪ್ರಚಾರ ನಡೆಸಿದೆ ಎನ್ನುವ ವಿಡಿಯೋ ಇದೆ. ಇದರ ವಿರುದ್ಧ ಕಿಡಿ ಕಾರಿರುವ ಟಿಡಿಪಿ ನೀವು ಸಿದ್ಧಂ ಎಂದಿರುವುದಕ್ಕೆ ಇದಕ್ಕೇನಾ ಎಂದು ಪ್ರಶ್ನಿಸುವ ಕಾಲೆಳೆದಿದೆ.
ಒಟ್ಟಿನಲ್ಲಿ ಆಂಧ್ರದಲ್ಲಿ ರಾಜಕೀಯ ಪ್ರಚಾರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತೆ ಎಂದು ಯಾರೂ ಊಹಿಸಿರಲಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.