ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈಗ ನೀಡುತ್ತಿರುವ 5 ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಸೇರಿಸಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ನಾವು ಘೋಷಿಸಿದ್ದೇವು. ಈಗ ಕೇಂದ್ರ ಸರ್ಕಾರ ಅದನ್ನು ತಡೆಯುವ ಮೂಲಕ ಬಿಜೆಪಿ ಬಡವರ ವಿರೋಧಿ ಅನ್ನೋದು ಸಾಬೀತು ಪಡಿಸಿದೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಶಕ್ತಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಗ್ಯಾರೆಂಟಿ ಜಾರಿಗೆ ತಂದಿದ್ದೇವೆ. ಅಂತ್ಯೋದಯ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ. ಇದನ್ನು ಜುಲೈ 1ರಿಂದ ಜಾರಿಗೆ ತರುತ್ತಿದ್ದೇವೆ. ಆದರೆ, ಮೊದಲು ಒಪ್ಪಿಕೊಂಡಿದ್ದ ಕೇಂದ್ರ ಆಹಾರ ನಿಗಮ ಈಗ ಸ್ಥಗಿತಗೊಳಿಸಿದೆ ಎಂದರು.
ಒಂದು ಕೆಜಿಗೆ 34 ರೂಪಾಯಿ ಹಾಗೂ ಸಾಗಣೆ ವೆಚ್ಚ 2.60 ಸೇರಿ ಒಟ್ಟು 36 ರೂಪಾಯಿ 60 ಪೈಸೆ ಹೇಳಿದ್ದರು. ಪ್ರತಿ ತಿಂಗಳು ಕೊಡಲು ಎಫ್ ಸಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದರು. 12ಕ್ಕೆ ಈ ಪತ್ರ ಬಂದಿದೆ. ಇದಾದ ಬಳಿಕ 13ಕ್ಕೆ ಮತ್ತೊಂದು ಪತ್ರ ಬಂದಿದೆ. ಗೋಧಿ ಮತ್ತು ಅಕ್ಕಿಯನ್ನು ಓಎಂಎಸ್ಎಸ್(ಡಿ) ರಾಜ್ಯ ಸರ್ಕಾರ ಇರುವಲ್ಲಿ ಸ್ಥಗತಿಗೊಳಿಸಲಾಗುವುದು. ಉತ್ತರ, ಪೂರ್ವ ರಾಜ್ಯಗಳಿಗೆ ಕೇಂದ್ರದ ಆಹಾರ ಧಾನ್ಯ ಪೂರೈಸಲಾಗುವುದು ಎಂದು ಕೇಂದ್ರ ತಿಳಿಸಿದೆ ಎಂದಿದ್ದಾರೆ. 7 ಲಕ್ಷ ಟನ್ ಅಕ್ಕಿ ಸರ್ಕಾರದ ಹತ್ತಿರ ಇದ್ದರೂ ನಮ್ಮ ಯೋಜನೆ ಹಾಳು ಮಾಡಲು ಕೇಂದ್ರ ಸರ್ಕಾರ ಯತ್ನಿಸಿದೆ. ನಾವು ಹಣ ನೀಡುತ್ತೇವೆ. ಆದರೂ ಅಕ್ಕಿ ಕೊಡದೆ ರಾಜಕೀಯ ಮಾಡುತ್ತಿದೆ ಅಂತಾ ವಾಗ್ದಾಳಿ ನಡೆಸಿದರು.