ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಪೋಷಕರಿಂದ 100 ರೂಪಾಯಿಯನ್ನು ದೇಣಿಗೆಯ ಮೂಲಕ ಸಂಗ್ರಹಿಸುವ ಕುರಿತು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಎಸ್ ಡಿಎಂಸಿ ಮೂಲಕ ದೇಣಿಗೆ ಸಂಗ್ರಹಿಸಿ ಶಾಲೆಗಳ ಅಭಿವೃದ್ಧಿ ಬಳಿಸಿಕೊಳ್ಳುವ ಪ್ರಸ್ತಾಪ ಮಾಡಿದ್ದರು.
ಬಲವಂತ ಇಲ್ಲದೆ ತಿಂಗಳಿಗೆ ಸಭೆ ಮಾಡಿ ನೂರು ರೂಪಾಯಿ ಸಂಗ್ರಹಿಸಲು ಆದೇಶ ಹೊರಡಿಸಿದ್ದರು. ಇದಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಶಾಲೆ ನಡೆಸಲು ಯೋಗ್ಯತೆ ಇಲ್ಲದ ಸರ್ಕಾರ, ಶೇಕಡ 40ರಷ್ಟು ಕಮಿಷನ್ ಹೊಡೆಯುವ ಸರ್ಕಾರ ಅಂತೆಲ್ಲ ವಾಗ್ದಾಳಿ ನಡೆಸಲಾಗಿತ್ತು. ಈಗ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.
ರಾಜಕಾರಣಿಗಳು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಆದೇಶ ಹಿಂದಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಲೆಯ ಅಭಿವೃದ್ಧಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕೆ ಸಚಿವರು, ಸಿಎಂಗೂ ಸಂಬಂಧವಿಲ್ಲ. ಎಲ್ಲ ಸುತ್ತೋಲೆಗಳನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ ಎಂದರು.
ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕೆಂದು ಎಲ್ಲಿಯೂ ಹೇಳಿಲ್ಲ. ಪ್ರತಿ ತಿಂಗಳು ಎಸ್ ಡಿಎಂಸಿ ಮೂಲಕ 100 ರೂಪಾಯಿ ಸಂಗ್ರಹಿಸಲು ತಿಳಿಸಲಾಗಿದೆ. ಹಣ ಕೊಟ್ಟವರಿಗೆ ರಶೀದಿ ಕೊಡಬೇಕು ಎಂದು ಹೇಳಿದ್ದಾರೆ. ಈಗ ಆದೇಶವನ್ನೇ ಹಿಂದಕ್ಕೆ ಪಡೆಯಲಾಗಿದೆ.